Part - 46



ಮೂಲ:
ಶಬ್ದಾದಿಭಿಃ ಪಂಚಭಿರೇವ ಪಂಚ
ಪಂಚತ್ವಮಾಪುಃ ಸ್ವಗುಣೇನ ಬದ್ಧಾಃ |
ಕುರಂಗ_ಮಾತಂಗ_ಪತಂಗ_ಮೀನ_
ಭೃಂಗಾ ನರಃ ಪಂಚಭಿರಂಚಿತಃ ಕಿಮ್ ||೭೬||

ಪ್ರತಿಪದಾರ್ಥ:
ಶಬ್ದಾದಿಭಿಃ = ಶಬ್ದವೇ ಮೊದಲಾದ, ಪಂಚಭಿಃ_ಏವ_ಪಂಚ=ಐದು ವಿಷಯಗಳಿಂದ, ಪಂಚತ್ವಂ=ಸಾವನ್ನು, ಆಪುಃ=ಹೊಂದುತ್ತವೆ, ಸ್ವಗುಣೇನ=ತಮ್ಮ ವಿಷಯಾಭಿಲಾಷೆಯ,
ಬದ್ಧಾಃ=ಪಾಶದಿಂದ ಬಂಧಿತವಾಗಿ, ಕುರಂಗ_ಮಾತಂಗ_ಪತಂಗ = ಜಿಂಕೆ, ಆನೆ, ಚಿಟ್ಟೆ (ಮಿಡತೆ), ಮೀನ_ಭೃಂಗಾ = ಮೀನು ಮತ್ತು ದುಂಬಿ, ಪಂಚಭಿಃ_ಅಂಚಿತಃ=ಪಂಚೇಂದ್ರಿಯಗಳಿಂದ ಉತ್ತೇಜಿತನಾಗುವ(ಕೂಡಿರುವ), ನರಃ_ಕಿಂ = ಮಾನವನ ಬಗ್ಗೆ ಹೇಳುವುದೇನಿದೆ ?

ತಾತ್ಪರ್ಯ:
ಜಿಂಕೆ, ಆನೆ, ಚಿಟ್ಟೆ, ಮೀನು ಮತ್ತು ದುಂಬಿಯು ಶಬ್ದವೇ ಮೊದಲಾದ ಪಂಚ ವಿಷಯಗಳ ಪಾಶಕ್ಕೆ ಸಿಲುಕಿ, ತಮ್ಮನ್ನು ಸೆಳೆಯುವ ಯಾವುದೋ ಒಂದು ಗುಣಕ್ಕೆ ಮನಸೋತು ಸಾವಿಗೀಡಾಗುತ್ತವೆ. ಹಾಗಾಗಿ ವಿವಿಧ ಇಂದ್ರಿಯಗಳಿಂದ ಕೂಡಿರುವ ಮನುಷ್ಯನ ಬಗ್ಗೆ ಏನು ಹೇಳುವುದು ?.

ವಿವರಣೆ:
ಜಿಂಕೆಯನ್ನು ಹಿಡಿಯಲು ಅಥವಾ ಬೇಟೆಯಾಡಲು ಅದು ಓಡದಂತೆ ತಡೆಯುವುದು ತುಂಬ ಮುಖ್ಯವಾಗುತ್ತದೆ. ಬೇಟೆಗಾರರು ಹರಿಣವು ಮನಸೋಲುವ ಶಬ್ದಗಳನ್ನು ಹೊರಡಿಸಿ ಅದು ಆಲಿಸುತ್ತಾ ನಿಲ್ಲುವಂತೆ ಮಾಡಿ ಹೊಡೆಯುತ್ತಾರೆ(ಶಾಸ್ತ್ರೀಯ ಸಂಗೀತವನ್ನು ಜಿಂಕೆಗಳು ತದೇಕಚಿತ್ತದಿಂದ ಆಲಿಸುತ್ತವೆ ಎಂಬ ಮಾತಿದೆ) . ಕಾಡಿನಲ್ಲಿ(ಈಗ ನಾಡಿನಲ್ಲಿ !) ಸ್ವೇಚ್ಚೆಯಿಂದ ವಿಹರಿಸುವ ಮತ್ತು ಹಿಡಿಯಲು ಅಶಕ್ಯವಾಗಿರುವ ಒಂಟಿಸಲಗವೂ ಹೆಣ್ಣಾನೆಯ ಸ್ಪರ್ಶ ಸುಖಕ್ಕೆ ಹಾತೊರೆದು ಅಥವಾ ಸಜಾತೀಯ ಪ್ರೇಮಕ್ಕೆ ಒಳಗಾಗಿ ಬಂಧಿಯಾಗುತ್ತದೆ(ಕಾಡಾನೆಯನ್ನು ಹಿಡಿಯಲು ಹೆಣ್ಣಾನೆಯನ್ನು ಮುಂದಿಟ್ಟುಕೊಂಡೇ ಕಾರ್ಯಾಚರಣೆ ರೂಪಿಸುವ ಪದ್ಧತಿ ಇದೆ) . ಚಿಟ್ಟೆಯು ಪ್ರಕಾಶಮಾನವಾದ ದೀಪದ ಬೆಳಕಿನ ರೂಪದ ಸೆಳೆತಕ್ಕೆ ಸಿಲುಕಿ ಸಾವಿಗೀಡಾಗುತ್ತದೆ. ಮೀನು ಗಾಳಕ್ಕೆ ಸಿಲುಕಿಸಿರುವ ಹುಳುವಿನ ಆಸೆಗೆ(ರಸಾಸ್ವಾದನೆಗೆ) ಒಳಗಾಗಿ ಸಿಕ್ಕಿಬೀಳುತ್ತದೆ. ಘ್ರಾಣೇಂದ್ರಿವನ್ನೇ ತೃಪ್ತಿಪಡಿಸಲು ಹಾತೊರೆಯುವ ದುಂಬಿಯು ಹೂವಿನ ಪರಿಮಳಕ್ಕೆ (ಗಂಧ) ಹಾತೊರೆಯುತ್ತಾ ಸಂಪಿಗೆ ಹೂವನ್ನು ಮೂಸಿದಾಗ ಸಾವಿಗೀಡಾಗುತ್ತದೆ ಎಂಬ ಪ್ರಸಿದ್ಧ ವಾಕ್ಯವಿದೆ. ಜತೆಗೆ ಕೀಟ ಭಕ್ಷಕ ಸಸ್ಯಗಳೂ ಇರುವುದರಿಂದ ಪತಂಗ ಜಾತಿಯವು ಆಯಾ ಸಸ್ಯಗಳಿಂದ ಹೊರಸೂಸುವ ವಿಶಿಷ್ಟ ಗಂಧಕ್ಕೆ ಮರುಳಾಗಿ ಪುಷ್ಪಪಾತ್ರೆಯ ಮೇಲೆ ಕುಳಿತ ತಕ್ಷಣ ಅದರಲ್ಲಿನ ಅಂಟುಜಾತಿಯ ರಸವು ಕೀಟವು ಹಾರದಂತೆ ಹಿಡಿದು ಜೀರ್ಣವಾಗಿಸಿಕೊಳ್ಳುತ್ತವೆ ಎಂಬುದು ವೈಜ್ಞಾನಿಕ ಸಂಗತಿಯಾಗಿದೆ. ಕೀಟ_ಪ್ರಾಣಿಗಳ ವಿಷಯವೇ ಹೀಗಾದರೆ ಜೈವಿಕ ವರ್ಗದಲ್ಲೆ ಅತ್ಯಂತ ಬುದ್ಧಿವಂತನೆಂದೂ, ವಿವಿಧ ಅಂಗೋಪಾಂಗಗಳನ್ನು ಹೊಂದಿ ಇಂದ್ರಿಯಗಳನ್ನು ಸೆಳೆಯುವ ವಿಷಯಗಳಲ್ಲೆ ಮಗ್ನನಾಗುವ ಸಾಮಾನ್ಯ ಮನುಷ್ಯನ ಪಾಡೇನು?, ಆತ ರಾಗ_ದ್ವೇಶಗಳಿಂದ ಪಾರಾಗುವುದು ಸುಲಭ ಸಾಧ್ಯವೆ ಎಂದು ಕೇಳುತ್ತಾರೆ.
.......
ಟಿಪ್ಪಣಿ:
ಪಂಚತ್ವ: ಪಂಚಭೂತಗಳಲ್ಲಿ ಲೀನವಾಗುವುದು (ಮರಣ ಹೊಂದುವುದು)

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ