Part -37



ಮೂಲ:
ಯಸ್ತ್ವsಯಾದ್ಯ ಕೃತಃ ಪ್ರಶ್ನೋ ವರೀಯಾಂಛಾಸ್ತ್ರವಿನ್ಮತಃ |
ಸೂತ್ರ ಪ್ರಾಯೋ ನಿಗೂಢಾರ್ಥೋ ಜ್ಞಾತವ್ಯಶ್ಚ ಮುಮುಕ್ಷುಭಿಃ ||೬೭||

ಪ್ರತಿಪದಾರ್ಥ:
ಅದ್ಯ=ಇಂದು, ತ್ವಯಾ=ನಿನ್ನಿಂದ, ಯಃ=ಯಾವ, ಪ್ರಶ್ನಃ=ಪ್ರಶ್ನೆಯು, ಕೃತಃ=ರೂಪಗೊಂಡಿತೋ, ವರೀಯಾನ್=ಶ್ರೇಷ್ಠವಾದುದು, ಶಾಸ್ತ್ರವಿತ್_ಮತಃ=ಶಾಸ್ತ್ರಜ್ಞರಿಂದ ಸಮ್ಮತಿಸಲ್ಪಟ್ಟಿದ್ದು, ಸೂತ್ರ ಪ್ರಾಯಃ=ಸೂತ್ರಗಳಿಗೆ ಪೂರಕವಾದದ್ದು, ನಿಗೂಢಾರ್ಥಃ=ಗಹನ_ಗಂಭೀರ ಅರ್ಥವುಳ್ಳದ್ದು, ಮುಮುಕ್ಷುಭಿಃ ಚ=ಮತ್ತು ಮುಮುಕ್ಷುಗಳೂ, ಜ್ಞಾತವ್ಯಃ=ತಿಳಿದುಕೊಳ್ಳುವಂತದ್ದು.

ತಾತ್ಪರ್ಯ:
(ಶಿಷ್ಯನೇ) ಇಂದು ನೀನು ಯಾವ ಪ್ರಶ್ನೆಗಳನ್ನು ಕೇಳಿದೆಯೋ ಅವೆಲ್ಲವೂ ಶ್ರೇಷ್ಠವಾದದ್ದು. ಶಾಸ್ತ್ರಗಳನ್ನು ತಿಳಿದವರಿಂದ ಸಮ್ಮತಿಸಲ್ಪಟ್ಟಿರುವುದು. ಸೂತ್ರಾದಿಗಳಿಗೆ ಸಮನಾಗಿರುವುದು ಮತ್ತು ಗಂಭೀರವಾದ ಅರ್ಥವುಳ್ಳದ್ದು, ಮಿಗಿಲಾಗಿ ಮುಮುಕ್ಷುಗಳೂ ತಿಳಿಯಬೇಕಾಗಿರುವುದು.

ವಿವರಣೆ:
ಸಾಧನಚತುಷ್ಟಯ (ಇಲ್ಲಿ ನೋಡಿ : http://chudamaniviveka.blogspot.com/2011/09/blog-post.html) ಸಂಪನ್ನನಾಗಿ ಬಂದ ಜ್ಞಾನಾರ್ಥಿಯು (ಶಿಷ್ಯನು) ತತ್ವೋಪದೇಶಕ್ಕಾಗಿ ಗುರುವಿನ ಬಳಿಗೆ ತೆರಳಿ ' ಕೋ ನಾಮ ಬಂಧಃ ‘ ಇತ್ಯಾದಿ (http://chudamaniviveka.blogspot.com/2014/08/blog-post_26.html) ಯಥೋಚಿತವಾದ ಪ್ರಶ್ನೆಗಳನ್ನು ಕೇಳಿದಾಗ, ಜ್ಞಾನಿಯಾದ ಗುರುವು ಶಿಷ್ಯನ ಪ್ರಶ್ನೆಗಳಿಗೆ ತಲೆದೂಗಿ ಮೆಚ್ಚಿಕೊಳ್ಳುತ್ತಾರೆ. ನೀನು ಕೇಳಿರುವ ಪ್ರಶ್ನೆಗಳು ಅತ್ಯುತ್ತಮವಾದದ್ದು, ಶಾಸ್ತ್ರಗಳನ್ನು ಚೆನ್ನಾಗಿ ಬಲ್ಲವರು ಅನುಮೋದಿಸಿರುವಂತದ್ದು, ಸೂತ್ರಾದಿಗಳಿಗೆ ಸಮನಾದದ್ದು ಮತ್ತು ಜ್ಞಾನಿಗಳಾದವರೂ ತಿಳಿಯತಕ್ಕಂತದ್ದು ಎನ್ನುತ್ತಾರೆ. ಶಿಷ್ಯನ ಪ್ರಶ್ನೆಯ ಬಳಿಕ ಜ್ಞಾನಿಯಾಗಲು ಸ್ವಪ್ರಯತ್ನವು ಎಷ್ಟು ಮುಖ್ಯವಾದುದು ಎಂದು ಪರಿಪರಿಯಾಗಿ ತಿಳಿಸುವ ಗುರುವು ಅನಂತರ ಉಹಾಪೋಹ ಕುಶಲತೆಯನ್ನು ಹೊಂದಿರುವ ನಿನ್ನ ಪ್ರಶ್ನೆಗಳಲ್ಲಿಯೇ ಜ್ಞಾನಾರ್ಜನೆಯ ಗೂಢಾರ್ಥವಿದೆ ಎಂದು ಸೂಚ್ಯವಾಗಿ ಹೇಳುತ್ತಾರೆ. ಮುಮುಕ್ಷುಗಳು ಸಹ ಮೆಚ್ಚುವಂತಹ ಅಥವಾ ತಿಳಿಯುವಂತಹ ಪ್ರಶ್ನೆಯನ್ನು ಕೇಳಿದ್ದೀಯಾ ಎಂದು ಪ್ರಶಂಸಿಸುತ್ತಾರೆ.

ಶಿಷ್ಯನು ಆತ್ಮ ಸಾಕ್ಷಾತ್ಕಾರದ ಪ್ರಶ್ನೆಗಳನ್ನು ಕೇಳುವುದರಿಂದಲೇ ಗುರುವಿನ ಪ್ರಶಂಸಾ ನುಡಿಗಳು ಕೇವಲ ಮುಖಸ್ತುತಿಯಾಗಿರದೆ ಅಂತಃಕರಣದಿಂದ ಬಂದಿರುತ್ತವೆ ಎಂದು ಸದ್ಗುರು ಚಂದ್ರಶೇಖರ ಭಾರತೀ ಸ್ವಾಮಿಗಳು ವ್ಯಾಖ್ಯಾನಿಸಿರುತ್ತಾರೆ. ಯಾರಿಗೆ ಆತ್ಮನಲ್ಲಿ ಗಮನವಿರುತ್ತದೆಯೋ ಅವನಲ್ಲಿ ಮಾತ್ರ ಇಂತಹ ಪ್ರಶ್ನೆಗಳು ಹುಟ್ಟುತ್ತವೆ ಎಂದು ಹೇಳುತ್ತಾರೆ.
................................

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ