Part -32



ಮೂಲ

ಅಜ್ಞಾನಸರ್ಪ-ದಷ್ಟಸ್ಯ ಬ್ರಹ್ಮ ಜ್ಞಾನೌಷಧಂ ವಿನಾ |
ಕಿಮು ವೇದೈಶ್ಚ ಕಿಮು ಶಾಸ್ತ್ರೈಶ್ಚ ಕಿಮು ಮಂತ್ರೈಃ ಕಿಮೌಷಧೈಃ ||೬೨||

ಪ್ರತಿಪದಾರ್ಥ

ಅಜ್ಞಾನಸರ್ಪ-ದಷ್ಟಸ್ಯ = ಅವಿದ್ಯೆ ಎಂಬ ಹಾವಿನಿಂದ ಕಚ್ಚಿಸಿಕೊಂಡವನಿಗೆ, ಬ್ರಹ್ಮ ಜ್ಞಾನೌಷಧಂ ವಿನಾ = ತನ್ನರಿವಿನ ಮದ್ದಲ್ಲದೆ, ವೇದೈಃ ಚ ಕಿಮು = ವೇದಗಳಿಂದೇನಾದೀತು, ಶಾಸ್ತ್ರೈಃ ಚ ಕಿಮು = ಶಾಸ್ತ್ರಾರ್ಥಗಳಿಂದೇನಾದೀತು, ಮಂತ್ರೈಃ ಕಿಮು = ಮಂತ್ರಗಳಿಂದೇನಾದೀತು, ಔಷಧೈಃ ಕಿಂ = ಔಷಧಗಳಿಂದೇನಾದೀತು .

ತಾತ್ಪರ್ಯ

ಅವಿದ್ಯೆ ಎಂಬ ಹಾವಿನಿಂದ ಕಚ್ಚಿಸಿಕೊಂಡವನಿಗೆ ಆತ್ಮ ಸಾಕ್ಷಾತ್ಕಾರವೆಂಬ ಔಷಧದಿಂದಲ್ಲದೆ, ವೇದಶಾಸ್ತ್ರದಿಂದಾಗಲೀ, ಮಂತ್ರೌಷಧಗಳಿಂದಾಗಲೀ ಏನು ಪ್ರಯೋಜನವಾಗುತ್ತದೆ.

ವಿವರಣೆ

ಮಾಯಾ ಪ್ರಪಂಚವೇ ಸತ್ಯ ಎಂಬ ಅಜ್ಞಾನದಿಂದ ಕೂಡಿರುವವನಿಗೆ ಯಾವ ನಾರು, ಬೇರು ಔಷಧಗಳೂ ಜ್ಞಾನೋದಯಕ್ಕೆ ಸಹಾಯ ಮಾಡುವುದಿಲ್ಲ. ಅವಿದ್ಯೆಯನ್ನು ಇಲ್ಲಿ ಹಾವಿನ ಕಡಿತಕ್ಕೆ ಹೋಲಿಸಿರುವುದು ಅಪೇಕ್ಷಣೀಯವೇ ಆಗಿದೆ. ಹಾವಿನ ವಿಷದಿಂದ ಸಾಯುದಕ್ಕಿಂತಲೂ, ಕಚ್ಚಿದ ಭ್ರಮೆಯಿಂದಲೇ ಅಥವಾ ಭಯದಿಂದಲೇ ಸಾಯುವವರು ಬಹಳಷ್ಷಿದ್ದಾರೆ. ಭ್ರಮಾ ಅಥವಾ ಮಾಯಾ ಎನ್ನುವ ಅಂಕುಶಕ್ಕೆ ಸಿಲುಕಿದವನನ್ನು ವೇದ, ಶಾಸ್ತ್ರ, ಮಂತ್ರಗಳಿಂದಲೂ ಪಾರು ಮಾಡಲು ಸಾಧ್ಯವಿಲ್ಲ. ಅಪರೋಕ್ಷಾನುಭೂತಿಯಿಂದ ಮಾತ್ರ ಸಾಧ್ಯ , ಅವಿದ್ಯೆಯನ್ನು ತೊಲಗಿಸಲು ಜ್ಞಾನಮಾರ್ಗವಲ್ಲದೆ ಮತ್ತಾವ ದಾರಿಯೂ ಇಲ್ಲ ಎಂದು ಹೇಳುತ್ತಾರೆ.

ಈಗ ಕರೊನಾ ಕಾಯಿಲೆಯು ಎಲ್ಲಡೆ ಹರಡಿಕೊಂಡು ತನ್ನ ಆಟವನ್ನು ತೋರಿಸುತ್ತಿದೆ. ಎಲ್ಲರಿಗೂ ತಿಳಿದಿರುವಂತೆ ಕರೊನಾ ಕಾಯಿಲೆಯಿಂದಲೇ ಸತ್ತಿರುವವರು ಬಹುತೇಕ ಶೂನ್ಯ ಎನ್ನಬಹುದು. ಅದರ ಭ್ರಮೆ ಅಥವಾ ಖಿನ್ನತೆಯಿಂದ ಅನೇಕರು ತಮ್ಮ ಬಿಪಿ, ಮಧುಮೇಹ ಇತ್ಯಾದಿಗಳನ್ನು ಹೆಚ್ಚಿಸಿಕೊಂಡು ಸಾವಿಗೀಡಾಗುತ್ತಿರುವುದು ಸತ್ಯವೇ ಆಗಿದೆ. ಇದನ್ನು ತಡೆಯಲು ಇರುವ ಏಕೈಕ ಮಾರ್ಗವೆಂದರೆ ಆ ರೋಗದ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದು ಮತ್ತು ಮುಂಜಾಗ್ರತೆ ವಹಿಸಿದರೆ ನಾನು ಕ್ಷೇಮವಾಗಿರುತ್ತೇನೆ ಎಂದು ಧೈರ್ಯ ತಳೆಯುವುದು. ವೇದ, ಶಾಸ್ತ್ರ, ಮಂತ್ರ-ಮಥನದಿಂದಲೇ ಮುಕ್ತಿ ಎನ್ನುವ ಭ್ರಮೆಯನ್ನು ಶಂಕರರು ನಿವಾರಿಸಿ ಸಾಧನಾ ಚತುಷ್ಟಯ ಸಂಪನ್ನತೆಯಿಂದ ಹುಟ್ಟುವ ಜ್ಞಾನವೇ ಮೋಕ್ಷಕ್ಕೆ ಕಾರಣ ಎಂದು ವಿವರಿಸುತ್ತಾರೆ.
-----------

ಕಾಮೆಂಟ್‌ಗಳು