Part - 68

ಮೂಲ:

ಸರ್ವವ್ಯಾಪೃತಿ_ಕರಣಂ_ ಲಿಂಗಮಿದಂ ಸ್ಯಾಚ್ಚಿದಾತ್ಮನಃ ಪುಂಸಃ |

ವಾಸ್ಯಾದಿಕಮಿವ ತಕ್ಷ್ಣಸ್ತೇನೈವಾತ್ಮಾ ಭವತ್ಯಸಂಗೋsಯಮ್ ||೯೯||


ಪ್ರತಿಪದಾರ್ಥ:

ತಕ್ಷ್ಣಃ = ಬಡಗಿಗೆ, ವಾಸ್ಯಾದಿಕಮ್ ಇವ = ಉಳಿ ಮೊದಲಾದವುಗಳಿಂದ, ಚಿದಾತ್ಮನಃ = ಚಿತ್ ಸ್ವರೂಪನಾದ, ಪುಂಸಃ = ಮನುಷ್ಯನಿಗೆ , ಇದಂ ಲಿಂಗಂ = ಈ ಸೂಕ್ಷ್ಮ ಶರೀರವು, ಸರ್ವವ್ಯಾಪೃತಿಕರಣಂ ಸ್ಯಾತ್ = ಸಮಸ್ತ ಪ್ರವೃತ್ತಿಗೆ ಸಾಧನವಾಗಿರುತ್ತದೆ ; ತೇನ ಏವ = ಆದುದರಿಂದಲೇ , ಅಯಮ್ ಆತ್ಮಾ = ಈ ಆತ್ಮನು, ಅಸಂಗಃ ಭವತಿ = ನಿರ್ಲಿಪ್ತನಾಗಿರುತ್ತಾನೆ.


ತಾತ್ಪರ್ಯ:

ಬಡಗಿಗೆ ಉಳಿ, ಸುತ್ತಿಗೆ ಮುಂತಾದ ಸಾಧನಗಳಂತೆ ಚಿದ್ರೂಪನಾದ ಆತ್ಮನಿಗೆ ಎಲ್ಲ ಪ್ರವೃತ್ತಿಗಳಿಗೂ ಸಾಧನವಾಗಿರುವುದು ಈ ಲಿಂಗಶರೀರವು. ಆದುದರಿಂದ ಆತ್ಮನು ನಿಸ್ಸಂಗನಾದವನೆಂದು ಸಂದೇಹವಿಲ್ಲದೆ ತಿಳಿಯಬಹುದು.


ವಿವರಣೆ:

ಬಡಗಿಯು ಎಷ್ಟೇ ಅತ್ಯುತ್ತಮ ಕೆಲಸಗಾರನಾಗಿದ್ದರೂ ಉಳಿ, ಸುತ್ತಿಗೆ ಮುಂತಾದ ಸಾಧನಗಳಿಲ್ಲದೆ ಏನೂ ಮಾಡಲಾಗುವುದಿಲ್ಲ. ಕೈಚಳಕವಿದ್ದ ಮಾತ್ರಕ್ಕೆ ಮಲಗುವ ಮಂಚ ತಾನೇ ತಯಾರಾಗುದಿಲ್ಲ, ಅದಕ್ಕೆ ಸರಿಯಾದ ಮರ, ಗರಗಸ, ನಟ್_ಬೋಲ್ಟ್ ಎಲ್ಲವೂ ಹೊಂದಿಕೆಯಾದಾಗ ಮಾತ್ರ ಕೆಲಸ ಮಾಡಲು ಸಾಧ್ಯವಾಗುತ್ತದೆ. ಮರಗೆಲಸಗಾರನ ತಿಳಿವಳಿಕೆಗೆ ಆಯುಧಗಳು ಸಾಧನಗಳಾಗುತ್ತವೇ ಹೊರತು, ಜ್ಞಾನಕ್ಕೆ ಪ್ರೇರಣೆಯಾಗುವುದಿಲ್ಲ. ಹಾಗೆಯೇ, ಚಿದ್ರೂಪನಾದ ಆತ್ಮನ ಎಲ್ಲ ವ್ಯಾಪಾರಕ್ಕೆ ಕಾರಣವಾಗುವುದು ಬುದ್ಧಿ ಮುಂತಾದ ಅಂತಃಕರಣದಿಂದ ಕೂಡಿರುವ ಈ ಲಿಂಗಶರೀರ ಎಂದು ಹೇಳುತ್ತಾರೆ.

ಬಡಗಿಯು ಆಯುಧಗಳನ್ನು ಬಳಸಿ ಕೆಲಸ ಮಾಡುವುದರಿಂದಲೇ ಆತನಿಗೆ ಆಯಾಸ, ಹಸಿವು , ಬಾಯಾರಿಕೆ ಮುಂತಾದವು ಉಂಟಾಗುತ್ತದೆ. ಬದುಕಿನ ಸುಖ_ದುಃಖಗಳಿಗೂ ಆತನ ಕೆಲಸವೇ ಕಾರಣವಾಗಿರುತ್ತದೆ. ಮರಗೆಲಸ ಗೊತ್ತಿದ್ದರೂ ಸಾಧನಗಳನ್ನು ಬಳಸಿ ಏನೂ ಮಾಡದೆ ಇದ್ದಾಗ ಆತನಿಗೆ ಯಾವ ಬಾಧೆಯೂ ಆಗುವುದಿಲ್ಲ. ಹಾಗೆಯೇ, ಆತ್ಮನು ಜಾಗ್ರತ್_ಸ್ವಪ್ನಾವಸ್ಥೆಯಲ್ಲಿ ಕರ್ತೃವಿನಂತೆಯೇ ತೋರಿಕೊಳ್ಳತ್ತಾನೆ. ಆದರೆ ಆತನು ನಿಜವಾಗಿಯೂ ಸಂಗರಹಿತನಾಗಿದ್ದು, ಲಿಂಗಶರೀರದ ಕಾರಣದಿಂದ ಮಾತ್ರ ಕರ್ತೃತ್ವವು ಪ್ರಕಟವಾಗುತ್ತದೆ ಎಂದು ವಿವರಿಸುತ್ತಾರೆ.

..................

ಕಾಮೆಂಟ್‌ಗಳು