ವಿವೇಕ ಚೂಡಾಮಣಿ ಭಾಗ -೫


 ಗ್ರಂಥದ ಮುಂದುವರಿದ ಭಾಗ

पठन्तु  शास्त्राणि यजन्तु  देवान्
कुर्वन्तु  कर्माणि भजन्तु देवताः ।
आत्मैक्य बोधेन विना विमुक्ति-
र्न सिध्यति ब्रह्मशतान्तरेपि ॥६॥

ಪಠಂತು ಶಾಸ್ತ್ರಾಣಿ ಯಜಂತು ದೇವಾನ್
ಕುರ್ವಂತು ಕರ್ಮಾಣಿ ಭಜಂತು ದೇವತಾಃ|
ಆತ್ಮೈಕ್ಯ ಬೋಧೇನ ವಿನಾ ವಿಮುಕ್ತಿ-
-ರ್ನ ಸಿಧ್ಯತಿ ಬ್ರಹ್ಮ ಶತಾಂತರೇಪಿ ||೬||

ಮುಕ್ತಿಯ ಮಹತ್ವವನ್ನು ತಿಳಿಸುತ್ತಾ ಶ್ರೀ ಶಂಕರರು ಮುಂದೆ ಬಹಳ ದಿಟ್ಟವಾದ ಧೀರವಾದ ಘೋಷಣೆಯನ್ನು ಮಾಡುತ್ತಾರೆ. ಮೇಲಿನ ಶ್ಲೋಕದ ವಿವರಣೆಯನ್ನು ತಿಳಿಯುವುದರ ಮೂಲಕ ಆ ಉದ್ಘೋಷವೇನು ಎಂಬುದನ್ನು ಅರಿಯೋಣ.

ಪಠಂತು ಶಾಸ್ತ್ರಾಣಿ (=ಶಾಸ್ತ್ರಗಳನ್ನು ಓದುವುದು),   ಯಜಂತು ದೇವಾನ್ (=ದೇವತೆಗಳನ್ನು ಪೂಜಿಸುವುದು)
ಕುರ್ವಂತು ಕರ್ಮಾಣಿ (=ಕರ್ಮಗಳನ್ನು ಮಾಡುವುದು),  ಭಜಂತು ದೇವತಾ: (=ದೇವತೆಗಳನ್ನು ಸ್ತುತಿಸುವುದು)
ಆತ್ಮ್ಯೆಕ್ಯ ಬೋಧೇನ ವಿನಾ ವಿಮುಕ್ತಿಃ (= ಆತ್ಮಜ್ಞಾನ(ಬ್ರಹ್ಮ ಸಾಕ್ಷಾತ್ಕಾರೆ) ವಿಲ್ಲದೆ ಮುಕ್ತಿಯಿಲ್ಲ)  
ನ ಸಿಧ್ಯತಿ ಬ್ರಹ್ಮ ಶತಾಂತರೇಪಿ (= ನೂರು ಚತುರ್ಮುಖ ಬ್ರಹ್ಮರು ಆಗಿಹೋದರೂ ಸಿದ್ಧಿಸದು)

"ಆರು ಶಾಸ್ತ್ರವ ಓದಿದರಿಲ್ಲ ನೂರಾರು ಪುರಾಣವ ಪಠಿಸಿದರಿಲ್ಲ" ಎಂಬ ದಾಸವಾಣಿಯನ್ನು ಕೇಳಿರುತ್ತೇವೆ.ಶಾಸ್ತ್ರಗ್ರಂಥಗಳನ್ನು ಓದುವುದರಿಂದ, ದೇವತೆಗಳನ್ನು ಪೂಜಿಸುವುದರಿಂದ, ಕರ್ಮಾನುಷ್ಠಾನಗಳನ್ನು ಆಚರಿಸುವುದರಿಂದ, ದೇವತೆಗಳನ್ನು ಸ್ತುತಿಸುವುದರಿಂದ, ಇದ್ಯಾವುದರಿಂದಲೂ ಮುಕ್ತಿಯು ದೊರೆಯುವುದಿಲ್ಲ ಎಂದು ಶಂಕರರು ಹೇಳುತ್ತಾರೆ.  ಹಾಗಾದರೆ ಮುಕ್ತಿಯ ದಾರಿ ಯಾವುದು ? ಈ ಚಿಂತೆ-ಕೋಟಲೆಗಳಿಂದ ಬಿಡುಗಡೆ ಎಂತು ?.
ತನ್ನೊಳಗಿನ ಸುಪ್ತ ಪ್ರಜ್ಞೆಯನ್ನು ಜಾಗೃತಗೊಳಿಸಿ ಪರಮಾರ್ಥ ಚಿಂತನೆಗೆ ಒಡ್ಡಿಕೊಳ್ಳದೆ ಇದ್ದಲ್ಲಿ ನೂರಾರು ಚತುರ್ಮುಖ ಬ್ರಹ್ಮರು ಬಂದು ಹೋದರೂ (ಅಷ್ಟು ಅವಧಿ ಕಳೆದರೂ) ಮೋಕ್ಷ ಅಥವಾ ಮುಮುಕ್ಷುತ್ವವು ದೊರಕಲಾರದು ಎಂದು ಹೇಳುತ್ತಾರೆ.
ಆತ್ಮ ಸಾಕ್ಷಾತ್ಕಾರದಿಂದ ಮಾತ್ರವೇ ನೆಮ್ಮದಿ, ಮುಕ್ತಿ ಎಂದಾದರೆ ನಾವು ದಿನವೂ ಮಾಡುವ ಪೂಜೆ, ಮಡಿ, ಸಾಂಪ್ರದಾಯಿಕ ಆಚರಣೆಗಳು, ಹವನಗಳು, ಪರೋಪಕಾರ, ದೇಶಸೇವೆ, ಪ್ರಾಮಾಣಿಕತೆ  ಇದೆಲ್ಲಾ ಬಳಕೆಗೆ ಬಾರದ್ದೇ ? ವ್ಯರ್ಥವೇ ? ಇದನ್ನೆಲ್ಲಾ ಮಾಡುವುದಾದರೂ ಏಕೆ?  ಎಂಬ ಪ್ರಶ್ನೆ ಏಳುವುದು ಸಹಜ.
ನಾವು ನಿತ್ಯವೂ ಆಚರಿಸುವ-ಅನುಸರಿಸುವ ಈ ಎಲ್ಲಾ ಕರ್ಮಗಳೂ ನಮ್ಮ ನಿರ್ಧಾರಗಳನ್ನು ಬಲಗೊಳಿಸುವಂತಹುದು. ನಮ್ಮಲ್ಲಿ ಸಾಮರ್ಥ್ಯವನ್ನು ತುಂಬುವಂತಹುದು. ನೆಮ್ಮದಿಯ ಅಕೌಂಟಿನಲ್ಲಿ ಜಮೆಯಾಗುವ ಡಿಪಾಸಿಟ್ಟುಗಳು !. ಹಾಗಾಗಿ ಕರ್ಮಗಳನ್ನು ಆಚರಿಸಲೇಬೇಕಾಗುತ್ತದೆ. ಕರ್ಮಗಳನ್ನು ಬಿಟ್ಟು ಬಿಡೋಣ ಎಂದರೆ, ಅವನ್ನು ಕಟ್ಟಿಕೊಂಡಿದ್ದೇವೆ ಎಂದೇ ಅರ್ಥ !. ಕರ್ಮಗಳಿಂದ ದೊರೆಯುವ ಫಲವು ಮಾತ್ರ ಗೌಣವಾದುದು. ’ಕರ್ಮವನ್ನು ಮಾಡು ಅದರ ಫಲಾಫಲಗಳನ್ನು ನನಗೆ ಬಿಡು’ ಎಂದು ಕೃಷ್ಣನು ಗೀತೆಯಲ್ಲಿ ಹೇಳಿದ್ದಾನೆ. ’ನನಗೆ ಬಿಡು’ ಎಂದರೆ ಫಲದ ಅಪೇಕ್ಷೆಯನ್ನು ಬಿಡು ಎಂದು ಅರ್ಥವೇ ಹೊರತು ಮಾಡಬಾರದ್ದನ್ನೆಲ್ಲಾ ಮಾಡಿ ಫಲಕ್ಕೆ ಮಾತ್ರ ಕೃಷ್ಣನನ್ನು ಹೊಣೆಯಾಗಿಸು ಎಂದಲ್ಲ. ಕೃಷ್ಣನು ಇಲ್ಲಿ ಜ್ಞಾನದ ಸಂಕೇತವೇ ಆಗಿದ್ದಾನೆ.
ಇಂದಿನ ನಿತ್ಯ ಜೀವನದ ಜಂಜಡದಲ್ಲಿ ಆತ್ಮಜ್ಞಾನ ಸಾಧನೆಗೆ ಸಮಯವಾದರೂ ಎಲ್ಲಿದೆ? ಕರ್ಮಗಳನ್ನಾದರೂ ಹೇಗೋ ಆಚರಿಸಬಹುದು, ಜ್ಞಾನಮಾರ್ಗಕ್ಕೆ ಅವಕಾಶವಾಗುವುದು ಕಷ್ಟವಲ್ಲವೆ ? ಕರ್ಮ-ಜ್ಞಾನಗಳ ಅ ಆ ಇ ಈ ಗಳೂ ಗೊತ್ತಿರದವರು ಆತ್ಮಜ್ಞಾನವನ್ನು ಸಾಧಿಸಲು ಸಾಧ್ಯವೆ ?  ಎಂಬ ಪ್ರಶ್ನೆಗಳು ಏಳುತ್ತದೆ.
ಬಿ.ಎ. ಮುಗಿಸಿದ ನಂತರವಷ್ಟೇ ಎಂ.ಎ. ಗೆ ಹೋಗಬಹುದೇ ಹೊರತು ಒಂದನೇ ತರಗತಿಯಿಂದ ನೇರವಾಗಿ ಎಂ.ಎ. ಪಾಸು ಮಾಡಲು ಸಾಧ್ಯವಿಲ್ಲ. ಎಲ್ಲದಕ್ಕೂ ಸಾಧನೆ ಎನ್ನುವುದು ಬೇಕಾಗುತ್ತದೆ.
"ಜಟ್ಟಿ ಕಾಳಗದಿ ಸೋತೊಡೇನಾಯ್ತು
ಪಟ್ಟು ವರಸೆಗಳೆಲ್ಲಾ ವಿಫಲವೆನ್ನುವೆಯಾ?
ಮುಟ್ಟಿ ನೋಡವನ ಮೈ ಕಬ್ಬಿಣ ಗಟ್ಟಿ
ಗಟ್ಟಿತನ ಗರಡಿ ಫಲ "       ಎನ್ನುವ ವಾಕ್ಯವನ್ನು  ನಾವು ಬಹುವಾಗಿ ಗಮನಿಸಬೇಕಾಗುತ್ತದೆ.
ಕೆಲವೊಂದು ವಿಷಯಗಳನ್ನು ಹೀಗೇ ಹೇಳಬೇಕಾಗುತ್ತದೆ.
’ಕೊಳೆತ ಹಣ್ಣನ್ನು ತಿನ್ನಬಾರದು ಆರೋಗ್ಯಕ್ಕೆ ಒಳ್ಳೆಯದಲ್ಲಾ’  ಎಂದರೆ ಆಗೊಮ್ಮೆ ಈಗೊಮ್ಮೆ ರುಚಿ ನೋಡುವ ಮನಸಾಗುತ್ತದೆ. ’ತಿಂದರೆ ಸತ್ತೇ ಹೋಗುತ್ತಿಯಾ’ ಎಂದಾಗ ಕೊಂಚ ಗಂಭೀರತೆ ಬರುತ್ತದೆ. ಕರ್ಮ-ಜ್ಞಾನಗಳ ವಿಚಾರವೂ ಹಾಗೆಯೇ. ನಾವು ಆಚರಿಸುವ ಯಾವ ಕರ್ಮಗಳೂ ವ್ಯರ್ಥವಾಗುವುದಿಲ್ಲ, ಅವೆಲ್ಲವೂ ಜ್ಞಾನ ಮಾರ್ಗದ ಮೆಟ್ಟಿಲುಗಳು. ಸಂಸಾರಿಗಳಿಗೆ ಲೌಕಿಕರಿಗೆ {ಪ್ರವೃತ್ತಿ ಧರ್ಮ‍(೧)} ಕರ್ಮಕ್ಕೆ ಸದಾ ಅವಕಾಶವಿದೆ, ಆದರೆ ಸನ್ಯಾಸಿಗಳಿಗೆ, ವಿರಾಗಿಗಳಿಗೆ {ನಿವೃತ್ತಿ ಧರ್ಮ(೧)} ಕರ್ಮದ ಗೊಡವೆಯೇ ಇಲ್ಲದವರಿಗೆ ಬಿಡುಗಡೆ ಹೇಗೆ ? . ಪ್ರವೃತ್ತಿ-ನಿವೃತ್ತಿ ಧರ್ಮಗಳನ್ನು ಎಷ್ಟೇ ಆಚರಿಸಿದರೂ ’ಆತ್ಮೈಕ ಜ್ಞಾನ’ ಲಭ್ಯವಾಗದೆ ಮುಮುಕ್ಷುತ್ವವಿಲ್ಲ ಎಂಬ ಧೀರವಾದ ಮಾತನ್ನು ಶ್ರೀ ಶಂಕರರು ಹೇಳುತ್ತಾರೆ.
-------------------------------------------------------

ಗ್ರಂಥದ ಮುಂದಿನ ಸೂಕ್ತಿಯನ್ನು ಗಮನಿಸೋಣ

अम्रुतत्वस्य नाशास्ति वित्तेनेत्येव हि श्रुतिः ।
ब्रवीति कर्मणो मुक्तेः अहेतुत्वं स्पुटं यतः ॥७॥

ಅಮೃತತ್ವಸ್ವ ನಾಶಾಸ್ತಿ ವಿತ್ತೇನೇತ್ಯೇವ ಹಿ ಶ್ರುತಿಃ | (=ವಿತ್ತ ಅಥವಾ ಸಂಪತ್ತಿನಿಂದ ಅಮೃತತ್ವವು(ಮುಕ್ತಿಯು) ದೊರಕದು)
ಬ್ರವೀತಿ ಕರ್ಮಣೋ ಮುಕ್ತೇಃ ಅಹೇತುತ್ವಂ ಸ್ಪುಟಂ ಯತಃ||೭|| (= ಕರ್ಮದಿಂದ ಮುಕ್ತಿಯಿಲ್ಲ ಎಂಬುದು ಸ್ಪಷ್ಟವಾದುದು)

ನಾವು ಲೌಕಿಕ ಕರ್ಮಗಳನ್ನು ಅನುಸರಿಸಿದಾಗ ಅದರಿಂದ ಸಂಪತ್ತಿನ ಅಥವಾ ದ್ರವ್ಯದ ಲಾಭವು ನಮಗೆ ಬರುತ್ತದೆ. ಪರೋಪಕಾರವು ಒಳ್ಳೆಯ ಕಾರ್ಯವೇ ಆಗಿದ್ದರೂ ಅಂತಹ ಕಾರ್ಯಕ್ಕೆ ಪ್ರತಿಫಲವನ್ನು ಪಡೆದಾಗ ಆ ಕರ್ಮವು ನೆಮ್ಮದಿಯ ಮಾರ್ಗಕ್ಕೆ ಅಡಚಣೆಯಾಗುತ್ತದೆ.  ’ಪುತ್ರ ಸಂತಾನವಿಲ್ಲದೆ ಮುಕ್ತಿಯಿಲ್ಲ’ ಎಂಬ ಮಾತೊಂದು ಅಲ್ಲಲ್ಲಿ ತೇಲಿ ಬರುತ್ತಿರುತ್ತದೆ. ಅಂತಹವರು ಶಂಕರರ ಈ ಮಾತನ್ನು ಗಮನಿಸಲೇ ಬೇಕು.
" ಶ್ರುತಿಗಳು (೨) ಹೇಳಿರುವಂತೆ ಪುತ್ರರು, ಧರ್ಮ-ಕರ್ಮಗಳು, ಉಪಾಸನೆ, ಸಂಪತ್ತು, ವಸ್ತು-ವಾಹನಗಳು, ಇವೆಲ್ಲವೂ ವಿತ್ತದ ಅಥವಾ ಧನದ ರೂಪವೇ ಆಗಿರುವುದರಿಂದ ಇವುಗಳಿಂದ ಮೋಕ್ಷದ ಆಸೆಯನ್ನು ಇಟ್ಟುಕೊಳ್ಳುವಂತಿಲ್ಲ"
ಎಂದು ಹೇಳುತ್ತಾರೆ. ’ನಕರ್ಮಣಾ ನಪ್ರಜಯಾ ಧನೇನ ತ್ಯಾಗೇನೈಕೇ ಅಮೃತತ್ವ ಮಾನಶುಃ’ ಎಂಬ ಉಪನಿಷತ್ತಿನ ಸಾಲುಗಳು ಬಹು ಪ್ರಖ್ಯಾತವಾದುದು. ತ್ಯಾಗದಿಂದಲೇ ಅಮೃತತ್ವವು ಎಂಬುದನ್ನು ಶ್ರುತಿಗಳು ಹೇಳುತ್ತವೆ.
ಎಲ್ಲರೂ ಬ್ರಹ್ಮಜ್ಞಾನಿಗಳಾಗಲು ಸಾಧ್ಯವೆ? ಆ ದಾರಿ ಅಷ್ಟೊಂದು ಸುಲಭವೇ ? ಎಂಬ ಪ್ರಶ್ನೆ ಬರುತ್ತದೆ.
ನನ್ನ ಮಿತ್ರರಾದ ಕೊಳ್ಳೇಗಾಲದ ಮಂಜುನಾಥರು ಒಮ್ಮೆ ನನಗೆ ಹೀಗೆ ಹೇಳಿದ್ದರು ( ಬಹುಷಃ ಅವರು ಹೇಳಿರುವುದು ಅವರಿಗೇ ಮರೆತು ಹೋಗಿರಬಹುದು !)
"ನೀವು ಒಂದು ಕೆಲಸ ಮಾಡಿಲ್ಲ ಅಂದ್ರೆ ಅದು ನಿಮ್ಮಿಂದ ಆಗೋದಿಲ್ಲ ಅಂತಾ ಅಲ್ಲ, ಅದು ನಿಮ್ಮ ಕೆಲಸದ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿಲ್ಲ,  ಅಂದರೆ ನೀವು ಆ ಕೆಲಸಕ್ಕೆ ಪ್ರಾಶಸ್ತ್ಯ ಕೊಟ್ಟಿಲ್ಲ ಅಂತ ಅರ್ಥ ಅಷ್ಟೆ " .

ಯಾವುದೂ ಅಸಾಧ್ಯವಲ್ಲ, ಆದರೆ ಆ ಕೆಲಸ ನಮ್ಮ ಅಜೆಂಡಾದಲ್ಲಿ ಟಾಪ್ ಪ್ರಿಯಾರಿಟಿ ಪಡೆದುಕೊಳ್ಳದೆ ಗುರಿಯನ್ನು ತಲುಪುವುದು ಕಷ್ಟಸಾಧ್ಯ ಎಂದು ಹೇಳಬಹುದು.

ಜ್ಞಾನಪ್ರಾಪ್ತಿಯಿಂದಲೇ(ಬ್ರಹ್ಮಜ್ಞಾನ) ಮುಕ್ತಿ ಎನ್ನುವುದಾದರೆ ಅದನ್ನು ಪಡೆಯುವ ದಾರಿ ಯಾವುದು? ಸಾಧನಗಳೇನು ?  ಮುಂದಿನ ಕಂತಿನಲ್ಲಿ ಈ ವಿಚಾರವನ್ನು ತಿಳಿಯೋಣ.

-----------------------------------------


ಟಿಪ್ಪಣಿ :

೧: ಪ್ರವೃತ್ತಿ ಧರ್ಮ : ನಮ್ಮ ನಿತ್ಯ -ನೈಮಿತ್ತಿಕ-ಕಾಮ್ಯ ಕರ್ಮಗಳು. ಉಪಾಸನೆ, ಸಾಂಪ್ರದಾಯಿಕ ಆಚರಣೆಗಳು, ಹೊಟ್ಟೆಪಾಡಿನ   ಕೆಲಸಗಳು ಮುಂತಾದುವು.

    ನಿವೃತ್ತಿ ಧರ್ಮ : ವೈರಾಗ್ಯ, ಸನ್ಯಾಸ, ಅಷ್ಟಾಂಗ ಯೋಗಗಳು [ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ.( ಇವುಗಳ ವಿವರಣೆಗಳು ಮುಂದೆ ಬರಲಿದೆ)] ಮುಂತಾದುವು

೨. ಶ್ರುತಿಗಳು ಹೇಳಿರುವಂತೆ :  ಬೃಹದಾರಣ್ಯಕ ಉಪನಿಷತ್ತಿನ ಭಾಷ್ಯ. ಯಾಜ್ಞವಲ್ಕ್ಯ ಮಹರ್ಷಿಗಳು ಮೈತ್ರಾದೇವಿಗೆ ಹೇಳುತ್ತಾರೆ " ಕರ್ಮದಿಂದ ಫಲವು ಲಭಿಸುವುದು ಮತ್ತು ಆ ಫಲವು ಧನಕ್ಕೆ ಸಮಾನವಾದುದರಿಂದ ಕರ್ಮದಿಂದ ಮುಕ್ತಿ ಸಾಧ್ಯವಿಲ್ಲ"  ಎಂದು.

--------------------------------------

ವಂದನೆಗಳೊಂದಿಗೆ...



ಕಾಮೆಂಟ್‌ಗಳು

  1. ಜ್ಞಾನಪ್ರಾಪ್ತಿಯಿಂದಲೇ ಮುಕ್ತಿಯೆಂಬ ಆಚಾರ್ಯ ಶಂಕರರ ನಿಲುವು ಒಟ್ಟಾರೆಯಾಗಿ ಬಂದಿದ್ದರೂ ನಿರೂಪಣೆಯಲ್ಲಿ ಕೆಲವು ಅಸ್ಪಷ್ಟತೆಯಿದೆಯೆನಿಸಿತು.

    ಮೊದಲ ಶ್ಲೋಕದ ಆಶಯ ಹೀಗೆ: "ನೀನು ಏನೇ ಕರ್ಮಗಳನ್ನು ಮಾಡು, ಆತ್ಮಬೋಧೆಯಿಲ್ಲದಿದ್ದರೆ ನೂರು ಬ್ರಹ್ಮರು ಬಂದುಹೋದರೂ ನಿನಗೆ ಮುಕ್ತಿಯಿಲ್ಲ (ಕರ್ಮಗಳನ್ನು ಮಾಡುತ್ತಲೇ ಇರಬೇಕಾಗುತ್ತದೆ)" ಅಂದರೆ ಆತ್ಮಬೋಧೆಯೇ ಆತ್ಮನ ಆತ್ಯಂತಿಕ ಗಮ್ಯವೆಂದಾಯಿತು. ಹಾಗಿದ್ದರೆ ಕರ್ಮ? ಅದು ಆತ್ಮಬೋಧೆಯ ಮಾರ್ಗ (ಶ್ಲೋಕವನ್ನು ಗಮನಿಸಿದರೆ, ಅದರಲ್ಲಿ ಕರ್ಮದ ನಿರಾಕರಣೆಯಿಲ್ಲ, ಬದಲಿಗೆ ಕರ್ಮದ ಆತ್ಯಂತಿಕತೆಯ ನಿರಾಕರಣೆಯಿದೆ, ಅಷ್ಟೇ). ಕರ್ಮವು ಆತ್ಮಬೋಧೆಯ ಮಾರ್ಗವಷ್ಟೇ, ಅದೇ ಗಮ್ಯವಲ್ಲ (ಈ ಮಾತನ್ನು ಶ್ಲೋಕದಲ್ಲಿ ಸ್ಪಷ್ಟವಾಗಿ ತಿಳಿಸಿಲ್ಲ, ಆದರೆ ನೀವು ಅದನ್ನು ಸೊಗಸಾಗಿ ಬಿಡಿಸಿಟ್ಟಿದ್ದೀರಿ). ಅಂದಮೇಲೆ, ಕರ್ಮವು ಜ್ಞಾನಕ್ಕೆ ಮಾರ್ಗ, ಜ್ಞಾನವು ಮುಕ್ತಿಗೆ ಮಾರ್ಗ, ಆದ್ದರಿಂದ ಕರ್ಮ-ಜ್ಞಾನ-ಮುಕ್ತಿ ಇವು ಎಲ್ಲವೂ ಮುಖ್ಯ ಎಂದಂತಾಯಿತು.

    ಆದರೆ ಮುಂದಿನ ಶ್ಲೋಕ ತುಸು ಬೇರೆಯದೇ ನಿಲುವು ತಳೆಯುತ್ತದೆ. ವಿತ್ತದಿಂದ ಮುಕ್ತಿ ದೊರಕದು; ಕರ್ಮವು ಫಲ (ವಿತ್ತ) ವನ್ನೀಯುತ್ತದೆ, ಆದ್ದರಿಂದ ಕರ್ಮದಿಂದ ಮುಕ್ತಿಯು ದೊರಕದು. ವಿತ್ತದಿಂದ ಮುಕ್ತಿಯೇಕೆ ದೊರಕದು? ಏಕೆಂದರೆ ಅದು ಲೋಕದಲ್ಲಿ ರಕ್ತಿಯನ್ನು ಹೆಚ್ಚಿಸುತ್ತದೆ, ಆದರೆ ಜ್ಞಾನಕ್ಕೆ ಬೇಕಾದ್ದು ವಿರಕ್ತಿ, ನಿಸ್ಸಂಗ. ಕರ್ಮವು ವಿತ್ತವನ್ನು ನೀಡುತ್ತದೆ, ವಿತ್ತದಿಂದ ರಕ್ತಿ. ಈ ಕಾರಣದಿಂದ ಕರ್ಮದೊಡನೆ ಸಂಗವೇರ್ಪಡುತ್ತದೆ, ಅದು ಜ್ಞಾನಬಾಹಿರ. ಆದ್ದರಿಂದ ಕರ್ಮಸಂಗಿಗೆ ಮುಕ್ತಿಯಿಲ್ಲ ಎಂದರು.

    ಮೊದಲ ಶ್ಲೋಕದಲ್ಲಿ ಕರ್ಮವು ಜ್ಞಾನಕ್ಕೆ ಪೂರಕವೆಂದೆವು, ಎರಡನೆಯ ಶ್ಲೋಕದಲ್ಲಿ ಕರ್ಮವು ಜ್ಞಾನಕ್ಕೆ ಬಾಹಿರವೆಂದೆವು. ಇದು ವಿರೋಧಾಭಾಸವಲ್ಲವೇ ಅಂದರೆ, ಅದಕ್ಕೆ ಸಮಾಧಾನ ಹೀಗೆ: ಕರ್ಮದಲ್ಲಿ ಎರಡು ವಿಧ; ಒಂದು ಜ್ಞಾನಸಾಧಕ, ಇನ್ನೊಂದು ಫಲ ಸಾಧಕ. ಮೊದಲನೆಯದು ಜ್ಞಾನಕ್ಕೆ, ತನ್ಮೂಲಕ ಮುಕ್ತಿಗೆ ಪೂರಕವಾದ್ದರಿಂದ ಅದು ಬೇಕು. ಇನ್ನು ಎರಡನೆಯದೋ, ಅದು ಫಲದಾಯಕವಾದ್ದರಿಂದ, ಜ್ಞಾನವಿಮುಖತೆಯನ್ನುಂಟುಮಾಡುವುದರಿಂದ ಅದು ತಿರಸ್ಕಾರಯೋಗ್ಯವಲ್ಲವೇ? ಅದಕ್ಕೆ ಸಮಾಧಾನವೆಂದರೆ, ವಿಮುಖತೆಯನ್ನುಂಟುಮಾಡುವುದು ಕರ್ಮವಲ್ಲ, ಅದರ ಫಲ. ಫಲವನ್ನು ಪಡೆಯದಿದ್ದರೆ? ಅದರಬಗ್ಗೆ ತಲೆಕೆಡಿಸಿಕೊಳ್ಳದಿದ್ದರೆ? ಅದನ್ನೇ ಭಗವದ್ಗೀತೆಯಲ್ಲಿ ಹೇಳಿದ್ದು ಅಲ್ಲವೇ, "ಕರ್ಮಣ್ಯೇವಾಧಿಕಾರಸ್ತೇ, ಮಾ ಫಲೇಶು ಕದಾಚನ - ನಿನಗೆ ಕರ್ಮದ್ದಷ್ಟೇ ಅಧಿಕಾರ, ಫಲದ್ದಲ್ಲ" ("ಮಾ ಫಲೇಶು ಕದಾಚನ" ಅನ್ನುವುದರ ಅರ್ಥ "ಫಲಕ್ಕೆ ನಿನಗೆ ಅಧಿಕಾರವಿಲ್ಲ" ಎಂದು ತಾನೆ?). "ಮಾ ಫಲೇಶು" ಅನ್ನುವುದನ್ನ ಬಹುವಿಧದಲ್ಲಿ ಅರ್ಥೈಸಬಹುದು "ಫಲ ನಿನ್ನ ಕೈಯಲ್ಲಿಲ್ಲ, ಬಂದದ್ದನ್ನು ಅನುಭವಿಸು"; "ಫಲದ ಅಪೇಕ್ಷೆ ಬಿಡು"; "ಫಲವನ್ನು ನನಗೆ ಬಿಡು (ಏನನ್ನು ಕೊಡಬೇಕೆನ್ನುವುದು ನನಗೆ ಗೊತ್ತು)"; "ಫಲವನ್ನು ನನಗೆ ಬಿಡು (ನಿನಗೆ ಅದು ಬೇಡ) ಇತ್ಯಾದಿ. ಇರಲಿ, ಇಲ್ಲಿ ನಾವು ಹೇಳಿದ್ದು, ಫಲದ ಆಸೆ ಬಿಡು. ಹೀಗೆ ಫಲದ ಆಸೆಬಿಟ್ಟ ಕ್ರಿಯಾಕರ್ಮವೂ (ತನ್ನ ವಿಮುಖತೆಯ ಸ್ವಭಾವವನ್ನು ಕಳೆದುಕೊಂಡು) ಜ್ಞಾನಸಾಧಕವಾಗಬಲ್ಲುದು ಎಂಬುದು ಪ್ರಾಯಶಃ ಶಂಕರರ ಆಶಯ. ಸಂಗ್ರಹವಾಗಿ ಹೇಳಬಹುದಾದರೆ ಜ್ಞಾನದ ದಾರಿಯನ್ನನುಸರಿಸು; ಕರ್ಮದ ದಾರಿ ಜ್ಞಾನದ ದಾರಿಯೊಡನೆ ಸಾಗುವವರೆಗೂ ಅದನ್ನೂ ಅನುಸರಿಸು; ಫಲದ ಕಾರಣದಿಂದ ಕರ್ಮವು ಬೇರೆದಾರಿಯಲ್ಲಿ ಕೊಂಡೊಯ್ಯುವುದಾದರೆ, ಫಲವನ್ನು ಬಿಟ್ಟು ಕರ್ಮವನ್ನಾಚರಿಸಲು ಆಗುವುದೋ ನೋಡು; ಅದೂ ಸಾಧ್ಯವಾಗುವಂತಿಲ್ಲದಿದ್ದರೆ, ಅಂಥ ಕರ್ಮವನ್ನೇ ನಿರಾಕರಿಸು, ಏಕೆಂದರೆ ಜ್ಞಾನವೊಂದೇ ಮುಕ್ತಿಸಾಧಕ, ಮತ್ತು ಅದಕ್ಕೆ ಮಾರಕವಾದದ್ದೆಲ್ಲವೂ ನಿರಾಕರಣೀಯ" ಆದ್ದರಿಂದ ಬುದ್ಧನ ಕರ್ಮನಿರಾಕರಣೆಯ ಮಾರ್ಗವನ್ನು ಅನುಸರಿಸದಿದ್ದರೂ ಜ್ಞಾನಕ್ಕೆ ಮಾರಕವಾಗುವುದಾದರೆ ಕರ್ಮನಿರಾಕರಣೆಗೆ ಶಂಕರರು ಹಿಂದೆಯುವುದಿಲ್ಲ (ಇದು ನನ್ನ ಅರಿವು; ತಪ್ಪಿದ್ದರೆ ದಯವಿಟ್ಟು ತಿದ್ದಿ)

    ಕರ್ಮದ ವಿಷಯ ಬಂದಾಗ ಆಚಾರ್ಯ ಮಧ್ವರ ನಿಲುವು ಸ್ವಾರಸ್ಯವಾಗಿದೆ. "ಕುರು ಭುಂಕ್ಷ್ವಚ ಕರ್ಮ ನಿಜಂ ನಿಯತಂ - "ನಿನಗೆ ನಿಜವಾದ (ಸ್ವಭಾವಕ್ಕೆ ತಕ್ಕದ್ದೆಂದು ಆಗಲೇ ನಿರ್ಧಾರವಾಗಿಬಿಟ್ಟಿರುವ) ಕರ್ಮಗಳನ್ನು ಮಾಡು (ಮಾಡಲೇ ಬೇಕು), ಅದರ ಫಲಗಳನ್ನು ಅನುಭವಿಸಲೇ ಬೇಕು" ಎನ್ನುತ್ತಾರೆ ಮಧ್ವಾಚಾರ್ಯರು. ಕರ್ಮವು ಮೋಕ್ಷಸಾಧಕವೇ? ಅಲ್ಲ, ಜ್ಞಾನಸಾಧಕ (ಅದು ಸತ್ಕರ್ಮವಾದರೆ - ದುಷ್ಕರ್ಮವಾದರೆ ಅಜ್ಞಾನಸಾಧಕ); ಜ್ಞಾನವು ಮುಕ್ತಿಸಾಧಕವೇ? ಅಲ್ಲ, ಅದು ಭಕ್ತಿಗೆ ಸಾಧಕ. ಹೀಗೆ ಹುಟ್ಟಿದ ಭಕ್ತಿಯೊಂದೇ ಮುಕ್ತಿಸಾಧಕ. ಭಕ್ತಿಯ ಪರಾಕಾಷ್ಠೆಯಲ್ಲಿ ಭಗವದನುಗ್ರಹವಾಗಿ, ಕರ್ಮದಿಂದ ಬಿಡುಗಡೆ ದೊರಕುತ್ತದೆ, ಅದರಿಂದ ಮುಕ್ತಿ.

    ಕರ್ಮವು ಸ್ವಭಾವಕ್ಕೆ ತಕ್ಕದ್ದಾಗಿ ಮೊದಲೇ ನಿರ್ಧಾರವಾಗಿಬಿಟ್ಟಿರುವುದರಿಂದ ಮುಕ್ತಿಯೋಗ್ಯವಾದ ಜೀವಿಗಳಿಗೆ ಮಾತ್ರ ಸತ್ಕರ್ಮದ ಸ್ವಭಾವವಿರುತ್ತದೆ, ಸತ್ಕರ್ಮದಿಂದ ಭಕ್ತಿ, ಭಕ್ತಿಯಿಂದ ಮುಕ್ತಿ. ಈ ಮುಕ್ತಿಯು ಅದ್ವೈತದ ಅರಿವಲ್ಲ, ಬದಲಿಗೆ ಭಗವತ್ಸಾಯುಜ್ಯದಲ್ಲಿ ದೊರೆಯುವ ಕುಂದಿಲ್ಲದ, ಕೊನೆಯಿಲ್ಲದ ಆನಂದ (ಈ ಆನಂದದ intensity ಕೂಡ ಜೀವರ ಸ್ವಭಾವಕ್ಕನುಗುಣವಾಗಿ ಬೇರೆಯಾಗುತ್ತದೆ. ಹೀಗಾಗಿ, ಮಧ್ವರ ಪ್ರಕಾರ ಮುಕ್ತಿಯು universal ಅಲ್ಲ, ಬದಲಿಗೆ personal). ಮುಕ್ತಿಯೋಗ್ಯವಲ್ಲದ ಜೀವಿಗಳಿಗೆ ಸತ್ಕರ್ಮದ ಪ್ರೇರಣೆಯೇ ಬರುವುದಿಲ್ಲವಾದ್ದರಿಂದ ಅಲ್ಲಿ ಮುಕ್ತಿಯ ಪ್ರಶ್ನೆಯೇ ಬರದು.

    ಇನ್ನು ದ್ವೈತಾದ್ವೈತಗಳ ಚರ್ಚೆಗೆ ಇದು ವೇದಿಕೆಯಲ್ಲ; ಕರ್ಮದ ಪರಿಕಲ್ಪನೆ ಸ್ವಾರಸ್ಯಕರವಾಗಿ ಕಂಡಿದ್ದರಿಂದ ವಿವಿಧ ದರ್ಶನಗಳಲ್ಲಿ ಈ ಬಗೆಗಿನ ನಿಲುವನ್ನು ತುಸು ವಿಶ್ಲೇಷಿಸಿದೆ ಅಷ್ಟೇ. ಕಾಮೆಂಟ್ ಬೋರುಹೊಡೆಸುವಷ್ಟು ಉದ್ದವಾಗಿದ್ದರೆ ಕ್ಷಮಿಸಿ :)

    ಪ್ರತ್ಯುತ್ತರಅಳಿಸಿ
  2. ನಿಮ್ಮ ಪ್ರತಿಕ್ರಿಯೆ ವಿಷಯಾಸಕ್ತರಿಗೆ ಅಮೃತದಂತಿದೆ. ಬಹಳ ಚೆನ್ನಾಗಿ ಅರ್ಥೈಸಿದ್ದೀರಿ.
    ಇಲ್ಲಿ ಶಂಕರರು ಕರ್ಮವನ್ನೇನೂ ನಿರಾಕರಣೆ ಮಾಡುವುದಿಲ್ಲ , ಆದರೆ ಕರ್ಮ ಫಲದಿಂದ ಆನುಷಂಗಿಕ ಪ್ರಯೋಜನ ಉಂಟು ಪ್ರಧಾನ ಪ್ರಯೋಜನವಿಲ್ಲ ಎಂದು ಸೂಚ್ಯವಾಗಿ ಹೇಳುತ್ತಾರೆ. ಗವುಣ ಪ್ರಯೋಜನ ಎಂದು ಅರ್ಥ. ( ಚಂದ್ರಶೇಖರ ಭಾರತಿಗಳು ಈ ಸೂಕ್ತಿಯನ್ನು ವ್ಯಾಖ್ಯಾನಿಸದೆ ಹಾಗೇ ಬಿಟ್ಟಿದ್ದಾರೆ. ಅರ್ಥ ಮಾಡಿಕೊಳ್ಳಲು ಇದು ತುಂಬಾ ಸುಲಭವೆಂದು!. ಅವರಿಗೇನೋ ಸುಲಭ ನಮಗೆ ?!) .

    "ಇನ್ನು ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ ಮತ್ತು ಸಾಯುಜ್ಯಗಳು ನಿಜವಾದ ಮುಕ್ತಿಗಳಲ್ಲವೆಂಬುದನ್ನು ಹಿಂದೆಯೇ "ಬ್ರಹ್ಮಾತ್ಮನಾ ಸಂಸ್ಥಿತಿಃ" (ಸಂಸ್ಥಿತಿಃ ಎನ್ನುವುದನ್ನು ವಿಶೇಷವಾಗಿ ಗಣಿಸಬೇಕು) ಎನ್ನುವ ಒಳ್ಳೆಯ ಪದದಿಂದ ಸೂಚಿಸಲಾಗಿದೆ. ಏಕೆಂದರೆ ಸಗುಣ ಬ್ರಹ್ಮವು ವಿಷಯವಾದುದರಿಂದ ಮೇಲಿನ ನಾಲ್ಕೂ ಮತಿಗಳು ಮಿಥ್ಯೆಯಾಗುತ್ತದೆ. ( ಮುಂದಿನ ಕಂತುಗಳನ್ನು ಇದು ವಿವರ ಚರ್ಚಿಸಲ್ಪಡುತ್ತದೆ). ನಾಲ್ಕು ಮತಿಗಳೂ ಇಲ್ಲದ , ನಿತ್ಯಶುಧ್ಧ, ನಿತ್ಯಬುಧ್ಧ್, ನಿತ್ಯಮುಕ್ತ ಸ್ವರೂಪವಾದ ಪ್ರತ್ಯಗಾತ್ಮನಿಗೆ ಅಭಿನ್ನವಾದ ಪೂರ್ಣಸ್ವರೂಪದಿಂದ ಇರುವ ಕೈವಲ್ಯವೇ ಮುಕ್ತಿ " ಎನ್ನುವ ಅರ್ಥದಲ್ಲಿ ಚಂದ್ರಶೇಖರ ಭಾರತಿಗಳು ತಮ್ಮ ಸಂಸ್ಕೃತ ವ್ಯಾಖ್ಯಾನದಲ್ಲಿ ಹೇಳುತ್ತಾರೆ.

    ಸಾಲೋಕ್ಯ= ಉಪಾಸ್ಯ ದೇವತೆಯ ಲೋಕವೇ ಉಪಾಸಕನಿಗೆ ಸಿಕ್ಕುವುದು.
    ಸಾಮೀಪ್ಯ=ಉಪಾಸ್ಯ ದೇವತೆಯ ಸಾನ್ನಿಧ್ಯ ದೊರೆಯುವುದು.
    ಸಾರೂಪ್ಯ = ಉಪಾಸ್ಯ ದೇವತೆಯ ರೂಪ, ಶರೀರಗಳಿಗೆ ಸಮನಾದ ರೂಪ, ಶರೀರಗಳು ಬರುವುದು.
    ಸಾಯುಜ್ಯ = ಉಪಾಸ್ಯ ದೇವತೆಯ ಶರೀರವೇ ಉಪಾಸಕನಿಗೆ ಇದ್ದು ಸೇರಿಕೊಳ್ಳುವುದು.

    ಮೀಮಾಂಸಕರ ಕರ್ಮಮಾರ್ಗದ ಮುಕ್ತಿಯನ್ನು ಶ್ರೀ ಶಂಕರರು ( ಬಹುಷಃ ಆಚಾರ್ಯರೆಲ್ಲರೂ )ಬಲವಾಗಿಯೇ ವಿರೊಧಿಸಿದ್ದಾರೆ ಎನ್ನುವುದು ಸರ್ವವಿದಿತ.

    ನಿಮ್ಮ ಕಮೆಂಟ್ ಉದ್ದವಾಗಿದ್ದು ಒಳ್ಳೆಯದಾಯಿತು. ಇನ್ನೂ ಉದ್ದವಾಗಲಿ ಎಂದು ಆಶಿಸುತ್ತೇನೆ. :).

    ಪ್ರತ್ಯುತ್ತರಅಳಿಸಿ
  3. ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಮರದ ಮೂರ್ತಿಗಳ ಕೆತ್ತನೆ ಕೆಲಸಕ್ಕೆ ’ಗುಡಿಗಾರರು’ ಎಂಬ ಒಂದು ಸಮಾಜ ಇದೆ, ಸಮಾಜದಲ್ಲಿ ಒಂದೊಂದು ಕೆಲಸಕ್ಕೆ ಸಮಾಜದ ಒಂದೊಂದು ಭಾಗ ತೊಡಗಿಕೊಂಡಿದೆ. ಆ ಯಾ ಕೆಲಸಗಳಲ್ಲಿ ಅವರವರೇ ನಿಷ್ಣಾತರಿರುತ್ತಾರೆ. ಯಾವುದೋ ಸಣ್ಣ ಕಾಯಿಲೆ ನಮ್ಮನ್ನು ಬಾಧಿಸಿದರೆ ಚಿಕ್ಕ ಕ್ಲಿನಿಕ್ಕಿಗೆ ಹೋಗುತ್ತೇವೆ, ಸ್ವಲ್ಪ ಜಾಸ್ತಿಯದ್ದಾದರೆ ಆಸ್ಪತ್ರೆಗೆ ಇನ್ನೂ ಹೆಚ್ಚಿನ ತರಗತಿಯದ್ದಾದರೆ ಸ್ಪೆಶಲಿಸ್ಟ್ ಇರುವ ದೊಡ್ಡ ಆಸ್ಪತ್ರೆಗಳಿಗೆ ಹೋಗುತ್ತೇವೆ. ಆದ್ಯ ಶಂಕರರು ಪಾರಮಾರ್ಥಿಕದ ಸ್ಪೆಶಲಿಸ್ಟ್ ಆಗಿದ್ದಾರೆ. ಪ್ರಚಾರಕ್ಕೆ ಇಂಬುಗೊಡದೇ ತಮ್ಮ ಜನ್ಮ ಜಾತ ಕರ್ತವ್ಯವನ್ನು ಪೂರೈಸಿ ಭೌತಿಕವಾಗಿ ನಿರ್ಗಮಿಸಿದರೂ ತಾವೇ ಸ್ಥಾಪಿಸಿದ ಪೀಠಗಳಲ್ಲಿ ಇರುವ ಆಚಾರ್ಯರ ಪ್ರತಿನಿಧಿಗಳಲ್ಲಿ ಅವರು ನಮಗೆ ಮೌಖಿಕವಾಗಿ ಸಿಗುತ್ತಾರೆ. ಪಾರಮಾರ್ಥದ ದಾರಿಯಲ್ಲಿ ಮುನ್ನಡೆಸಲು ಅವರಂತಹ ವೈದ್ಯ ಬೇರೊಬ್ಬನಿಲ್ಲ! ಯೋಗಿಗಳೂ ಸಾಧಕರೂ ಬೇರೆ ಬೇರೇ ಹಂತಗಳವರೆಗೆ ತಲುಪಿ ತಮಗೆ ನಿಲುಕಿದ್ದನ್ನು ಅರುಹುತ್ತಾರೆ, ಆದರೆ ಶಂಕರರು ಹೇಳಿದ್ದರಲ್ಲಿ ಲೌಕಿಕವಾಗಿ ವೈಜ್ಞಾನಿಕರು ಪರಾಮರ್ಶಿಸಬಹುದಾದ ಅಂಶಗಳೂ ಅಡಗಿರುತ್ತವೆ. ಹಲವು ಕೋಟಿ ಬ್ರಹ್ಮರು ಆಗಿಹೋದರೂ ಮಾನವನಿಗೆ ಪರಬ್ರಹ್ಮದ ಅರಿವು ಉಂಟಾಗುವುದಿಲ್ಲ. ನಮ್ಮೊಳಗೇ ಅವಿತಿರುವ ಆ ಶಕ್ತಿ ನಮಗೇ ತಿಳಿದಿಲ್ಲ ! ನವಯುಗದಲ್ಲಿ ನಾವು ಯಾಂತ್ರಿಕವಾಗಿ ಇಂತಿಂಥಾದ್ದಕ್ಕೆ ಇಂತಿಂಥದು ಎಂದು ನಿರ್ಣಯಿಸಿಕೊಂಡುಬಿಟ್ಟಿದ್ದೇವೆ. ಸಿನಿಮಾ ಅಂದರೆ ಒಂದು ಹೊಡೆದಾಟ, ಲವ್ವು, ಕ್ಲೈಮ್ಯಾಕ್ಸು ಆದರೆ ಊಟಕ್ಕೆ ಒಂದು ಉಪ್ಪಿನಕಾಯಿ, ಪಲ್ಯ, ಕೋಸಂಬರಿ, ಸಾರು-ಸಾಂಬಾರು ಹೀಗೆ. ಅದು ಇರಲೇಬೇಕು ಎಂಬಂತಾಗಿಬಿಟ್ಟಿದೆ. ಜೀವನದಲ್ಲೂ ನಾವು ದೇವರನ್ನು ನೆನೆಯಲು ನಮಗೆ ಸಮಯವಿರುವುದಿಲ್ಲ. ಟಿವಿಯಲ್ಲಿ ’ಮುಕ್ತಮುಕ್ತ’ ಒಂದಿನವೂ ತಪ್ಪಿಸುವುದಿಲ್ಲ, ಕಾಫಿ-ಟೀ ಒಂದು ಹೊತ್ತೂ ಮರೆಯುವುದಿಲ್ಲ, ಕಾಡುಹರಟೆ-ವಿಹಾರ ಇವೆಲ್ಲಾ ನಡೆಯುತ್ತವೆ ಆದರೆ ಮುದುಕರು ಮಾಡುವ ಎಂಬ ಹಣೆಪಟ್ಟಿ ಹಚ್ಚಿದ ದೈವ ಧ್ಯಾನದಲ್ಲಿ ಯಾರಿಗೂ ಆಸಕ್ತಿಯಿಲ್ಲ. ಕೇವಲ ಯಾರದೋ ಸಮಾಧಾನಕ್ಕೆ ಮನೆಯಲ್ಲಿ ಕೋಳಿಗೊಂದು ಗೂಡು ಇದ್ದಹಾಗೇ ’ದೇವರಗೂಡು’ ನಿರ್ಮಿಸಿರುತ್ತೇವೆಯೇ ವಿನಃ ನಮ್ಮೊಳಗಿನ ಚೈತನ್ಯವನ್ನೇ ಅವಲೋಕಿಸುವ, ಆರಾಧಿಸುವ, ನಿತ್ಯವೂ ತಪ್ಪು-ಒಪ್ಪುಗಳ ವರದಿ ಒಪ್ಪಿಸಿಕೊಂಡು ಪರಾಮರ್ಶೆ ನಡೆಸುವ ಕಾರ್ಯ ನಮ್ಮಿಂದ ಸಾಧ್ಯವಾಗುತ್ತಿಲ್ಲ. ಎಲ್ಲೀವರೆಗೆ ನಾವು ಕೇವಲ ಲೌಕಿಕದ ಆಸ್ತಿ-ಅಂತಸ್ತು, ಜೀವನ ಎಂಬ ಮಾಯೆಯಿಂದ ನಮ್ಮನ್ನು ಮುಚ್ಚಿಕೊಳ್ಳುತ್ತೇವೆಯೋ ಅಲ್ಲೀವರೆಗೂ ನಮಗೆ ಮುಮುಕ್ಷುತ್ವ ಬರಲು ದಾರಿ ಕೂಡ ಕಾಣುವುದಿಲ್ಲ. ಕರ್ಮವನ್ನು ಮಾಡುವಾಗಲೂ ಹೇಗೆ ಭಗವಂತನ ನೆನೆಪು ಸದಾ ಇರಬೇಕು ಎಂಬುದನ್ನು ನಾರದ ಕಥೆಯೊಂದು ಹೀಗೆ ಹೇಳುತ್ತದೆ--- ನಾರದರಿಗೆ ತಾನೇ ಅತ್ಯಂತ ಶ್ರೇಷ್ಠಭಕ್ತನೆಂಬ ಅಹಂ ಬಂದುಬಿಟ್ಟಿತು. ಭಗವಂತ ನಾರದರೊಂದಿಗೆ ಮಾರುವೇಷದಲ್ಲಿ ಭೂಮಿಗೆ ಒಬ್ಬ ಹಳ್ಳಿಯ ರೈತನ ಮನೆಗೆ ಬಂದ. ಮುಗ್ಧ ರೈತನ ಮನೆತುಂಬಾ ಮಕ್ಕಳು-ಬಡತನ. ರಾತ್ರಿಯಲ್ಲಿ ಬಂದ ಅತಿಥಿಗಳನ್ನು ಆದರದಿಂದ ಸತ್ಕರಿಸಿದ ರೈತ ಅವರ ಊಟೋಪಚಾರ ಸರಿಯಾಗಿ ನೋಡಿಕೊಂಡ. ಮನೆಯಲ್ಲಿ ಎಲ್ಲರಿಗೂ ಆಗುವಷ್ಟು ಹಿಟ್ಟಿರಲಿಲ್ಲ. ಅತಿಥಿಗಳ ಊಟವಾದಮೇಲೂ ಮಕ್ಕಳು " ಅಮ್ಮಾ ನಮಗಿಂದು ಊಟವಿಲ್ಲವೇ ? " ಎಂದು ಕೇಳುತ್ತಿದ್ದುದು ಕೃಷ್ಣ-ನಾರದರಿಗೂ ಕೇಳಿಸುತ್ತಿತ್ತು. ಹಸಿದ ಹೊಟ್ಟೆಯಲ್ಲಿ ಮಕ್ಕಳೊಂದಿಗೆ ಉಪವಾಸ ಮಲಗಿದರೂ ಬಂದ ಅತಿಥಿಗಳನ್ನು ಉಪಚರಿಸಿದ್ದ ಆತ. ಮಾರನೇ ಬೆಳಿಗ್ಗೆ ಎದ್ದು ಮುಖಮಾರ್ಜನೆ ಮಾಡಿ ದೇವರ ಪಟಗಳ ಮುಂದೆ ದೀಪ-ಧೂಪ ಬೆಳಗಿ " ಗೋವಿಂದಾ ಶ್ರೀಹರಿ ನಿನ್ನ ನೆನಪು ಎಂದೆಂದೂ ಮಾಯದಿರಲಿ " ಎಂದ ಆ ರೈತ. ಆಯ್ತು ನಾರದ-ಕೃಷ್ಣರು ಹೊರಟೇಬಿಟ್ಟರು. ನಾರದ ಮತ್ತೆ ಕೇಳಿದ--ತಾನೇ ಭಕ್ತಶ್ರೇಷ್ಠನಲ್ಲವೇ ? ಎಂದು. ಕೃಷ್ಣ ಆತನಿಗೆ ಎಣ್ಣೆತುಂಬಿದ ಚಿಕ್ಕ ಗಡಿಗೆಯೊಂದನ್ನು ತಲೆಯಮೇಲಿಟ್ಟು ಜಗತ್ತನ್ನು ಸುತ್ತಿಬರುವಂತೇ ತಿಳಿಸಿದ. ಗಡಿಗೆ ಹೊತ್ತ ನಾರದ ಓಡಾಡುವಾಗ ಎಲ್ಲಿ ಎಡವಿ ಬಿದ್ದು ಹೋಗುತ್ತದೋ ಎಂಬ ಆತಂಕದಿಂದ ಒಮ್ಮೆಯೂ ಭಗವಂತನ ಸ್ಮರಣೆ ಮಾಡಲಿಲ್ಲ. ಮರಳಿಬಂದ ನಾರದನಲ್ಲಿ ಕೃಷ್ಣ ಕೇಳಿದ -- ಓಡಾಡುವಾಗ ಎಷ್ಟು ಬಾರಿ ಭಗವಂತನ ಧ್ಯಾನ ಮಾಡಿದೆ ? ನಾರದ ನಿರುತ್ತರಿಯಾಗಿದ್ದ! ಆಗ ಕೃಷ್ಣ ಹೇಳಿದ " ನೋಡೂ ನಾರದಾ ತನ್ನ-ತನ್ನ ಪರಿವಾರ ಹಸಿದ ಹೊಟ್ಟೆಯಲ್ಲೇ ಮಲಗಿದ್ದರೂ ಬೆಳಿಗ್ಗೆ ಎದ್ದು ತನ್ನ ಕರ್ತವ್ಯದಲ್ಲಿ ತೊಡಗುವ ಮುನ್ನ ಭಗವಂತನ ನಾಮಸ್ಮರಣೆ ಮಾಡಿದನಲ್ಲ ಆ ರೈತ ಅಂತಹ ಸಂಸಾರದ ಜವಾಬ್ದಾರಿ ಹೊತ್ತೂ ಆತ ಹಾಗೆ ಮಾಡಿದ ಆದರೆ ಕೇವಲ ಗಡಿಗೆಯನ್ನು ಹೊತ್ತು ನೀನು ಮಾಡಲಿಲ್ಲ " ಎಂದ. ನಾರದರಿಗೆ ತನ್ನ ಅಹಂಕಾರದ ಅರಿವು ಮೂಡಿತು.

    ನಾವು ನಮ್ಮ ಕರ್ತವ್ಯಗಳ ಮಧ್ಯೆಮಧ್ಯೆಯೂ ದೈವವನ್ನು ನೆನೆಯುತ್ತಾ ಮನುಷ್ಯ ಸಹಜವಗಿ ನಮ್ಮಿಂದ ಆಗಬಹುದಾದ ತಪ್ಪುಗಳನ್ನು ಮನ್ನಿಸೆಂದು ಆತನಲ್ಲಿ ಆತ್ಮನಿವೇದನೆ ಮಾಡಿಕೊಂಡರೆ ಮುಮುಕ್ಷುತ್ವದೆಡೆಗೆ ನಿಧಾನವಾಗಿ ಹೆಜ್ಜೆಯಿಡುತ್ತೇವೆ. ಅದಿಲ್ಲಾ ಕೋಟಿ ಬ್ರಹ್ಮರು ಆಗಿಹೋದರೂ ನಾವು ಪುನರಪಿ ಹುಟ್ಟು-ಸಾವಿನ ಚಕ್ರದಿಂದ ಹೊರಬರಲು ಸಾಧ್ಯವಿಲ್ಲ ಎಂಬುದು ಭಗವತ್ಪಾದರ ಸಂದೇಶವಾಗಿದೆ.

    ಲೇಖನ ಮುಂದುವರಿಸಿ, ಶುಭಾಶಯಗಳು.

    ಪ್ರತ್ಯುತ್ತರಅಳಿಸಿ
  4. [ನಾವು ನಿತ್ಯವೂ ಆಚರಿಸುವ-ಅನುಸರಿಸುವ ಈ ಎಲ್ಲಾ ಕರ್ಮಗಳೂ ನಮ್ಮ ನಿರ್ಧಾರಗಳನ್ನು ಬಲಗೊಳಿಸುವಂತಹುದು]
    ನಿಜ, ಸುಬ್ರಹ್ಮಣ್ಯರೇ.
    ನಾವು ನಿತ್ಯವೂ ಮಾಡುವ ಕರ್ಮಗಳು, ಆಚರಿಸುವ ಆಚರಣೆಗಳು,ನಮ್ಮ ಚಿಂತನೆಗಳು, ನಡವಳಿಕೆಗಳು,ನಿತ್ಯವೂ ನಮ್ಮನ್ನು ಮುಕ್ತಿಯಮಾರ್ಗದಲ್ಲಿ ಗಟ್ಟಿಮಾಡುತ್ತಾ ಹೋಗುತ್ತವೆ.ಸಾಯುವ ದಿನವೂ ಕೂಡ ಸತ್ಕರ್ಮವನ್ನು ಮಾಡುತ್ತಲೇ ಸಾವು ಬರಲಿ!. ಒಬ್ಬ ಮಹನೀಯರಿದ್ದರು.ಸಮಾಜದ ಜಾಗೃತಿಗಾಗಿ ತಮ್ಮ ಸರ್ವಸ್ವವನ್ನೂ ಸಮರ್ಪಿಸಿಕೊಂಡಿದ್ದ ಸಮಾಜಸೇವಕರು.ನಿತ್ಯವೂ ಬಿಡುವಿಲ್ಲದ ಅವರ ಸಮಾಜಕಾರ್ಯದಲ್ಲಿ ಒಂದುದಿನ ಯುವಕರಿಗೆ ದೇಶಭಕ್ತಿಯ ಭಾಷಣ ಮಾಡುತ್ತಾ ಮಾಡುತ್ತಾ ವೇದಿಕೆಯಿಂದ ಕುಸಿದು ಬಿದ್ದರು. ಪ್ರಾಣಪಕ್ಷಿ ಹಾರಿಹೋಗಿತ್ತು!!

    ಪ್ರತ್ಯುತ್ತರಅಳಿಸಿ
  5. [ಮುಕ್ತಿಯು universal ಅಲ್ಲ, ಬದಲಿಗೆ personal). ಮುಕ್ತಿಯೋಗ್ಯವಲ್ಲದ ಜೀವಿಗಳಿಗೆ ಸತ್ಕರ್ಮದ ಪ್ರೇರಣೆಯೇ ಬರುವುದಿಲ್ಲವಾದ್ದರಿಂದ ಅಲ್ಲಿ ಮುಕ್ತಿಯ ಪ್ರಶ್ನೆಯೇ ಬರದು]
    ಮಂಜುನಾಥರು ತಿಳಿಸುವ ಮುಕ್ತಿ ಎಂದರೆ ಕಟ್ಟಕಡೆಯ ಜೀವನ್ ಮುಕ್ತಿ. ಆದರೆ ನಿತ್ಯಜೀವನದಲ್ಲಿ ಆತಂಕಗಳಿಂದ, ಅತಿ ದು:ಖದಿಂದ, ಅತೀ ಸಂತೋಷದಿಂದ ಪಾರಾಗುವ ಬಗೆ ಹೇಗೆಂದು ಸುಬ್ರಹ್ಮಣ್ಯರು ತಿಳಿಸುತ್ತಾರೆ. ಇದು ಇಂದಿನ ಸಮಾಜಕ್ಕೆ ಅತೀ ಅಗತ್ಯವಾದುದು. ಈಗೆಲ್ಲಾ ವ್ಯಕ್ತಿತ್ವ ವಿಕಸನ ತರಬೇತಿಗಾಗಿ ಶುಲ್ಕಕೊಟ್ಟು ತರಗತಿಗಳಿಗೆ ಹೋಗುವ ಯುವಕರಿದ್ದಾರೆ. ಅಂತವರು ಶಂಕರರ ಭಜಗೋವಿಂದಮ್, ಸಾಧನಾ ಪಂಚಕಮ್, ವಿವೇಕ ಸಚೂಡಾಮಣಿ--ಈ ಗ್ರಂಥಗಳನ್ನು ಅರ್ಥಮಾಡಿಕೊಂಡು ಓದಬೇಕು. ಕಾಟಾಚಾರಕ್ಕಲ್ಲ. ಆಗ ನಿಜಜೀವನ ಧರ್ಮ ತಿಳಿಯುತ್ತಾ ಹೋಗುತ್ತದೆ. ನೆಮ್ಮದಿಯು ತಾನೇ ತಾನಾಗಿ ಇವನದಾಗುತ್ತದೆ.

    ಪ್ರತ್ಯುತ್ತರಅಳಿಸಿ
  6. ಶಂಕರರ ಶ್ಲೋಕಗಳಿಗೆ ಉತ್ತಮ ವ್ಯಾಖ್ಯಾನ ನೀಡಿ, ಶ್ಲೋಕದ ತಿರುಳು ಅರ್ಥವಾಗುವಂತೆ ಮಾಡಿದ್ದೀರಿ. ಅನೇಕ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  7. ವೈಚಾರಿಕ ಸರಣಿ ನಿಜಕ್ಕೂ ಜ್ಞಾನದ ಇದ್ದಿಲನ್ನು ತೀಡಿ ವಜ್ರವನ್ನಾಗಿಸುವಲ್ಲಿವೆ. ಎಲ್ಲರ ಅಭಿಪ್ರಾಯಗಳು ಈ ದಿಶಯಲ್ಲಿಯೇ ಇವೆಯೇ. ಮಂಜುನಾಥರ ತರ್ಕ ಈ ದಿಷೆಯಲ್ಲಿಯೇ ಇದೆ.
    ಆದರೆ ನನಗೊಂದು ವಿಚಾರ ಯಾವಾಗಲು ಕೊರೆಯುತ್ತದೆ - ಫಲಾಪೆಕ್ಷೆ ಇಲ್ಲದ ಕರ್ಮಾಚರಣೆಯಲ್ಲಿ ನಮ್ಮಲ್ಲಿನ ಶತಪ್ರತಿಶತ ಪ್ರಯತ್ನ ಕೊಡಲಾಗುತ್ತದೆಯೇ?
    ಫಾಲಾಪೆಕ್ಷೆಗಳು ದೈವಾದೀನವಾದರೆ ಕರ್ಮನಂಬಿಕೆ ಯಾಕೆ ಬೇಕು? ಕರ್ಮಾಚರಣೆ ಅವಶ್ಯವೇ?
    ಆದಿಮಾನವನಂತೆ ಹಸಿದಾಗ ಕರ್ಮ ಮಾಡಿ ಹೊಟ್ಟೆ ಹೊರೆಯುವಾದ ಬಿಟ್ಟು ಮಡದಿ ಮಕ್ಕಳು ಮನೆ ಅದು ಇಡು ಎಂದು ದೈವದತ್ತವಾದ ಆವಷ್ಯಗಳಿಗೆ ಮತ್ತಷ್ಟು ವಸ್ತುಗಳನ್ನೂ -ಬಟ್ಟೆ, ಮನೆ, ಕುಟುಂಬ, ಪೂಜೆ, ಪುನಸ್ಕಾರ, ಕೆಲಸ, ವಿಧ್ಯುತ್, ಓದು, ಕೆಲಸ, ಎಂದು ಮಾನವ ತನ್ನ ಬದುಕನ್ನು ತೀವ್ರ ಸಂಕೀರ್ಣತೆಗೆ ಒಳಪದಿಸಿದ್ದಾನೆ ಎಂದೆನಿಸುತ್ತದೆ. ಇತರ ಪ್ರಾಣಿಗಳಂತೆ ನಮಗೆ ಜೀವನ ಮಾಡಲಾಗದೆ?

    ಪ್ರತ್ಯುತ್ತರಅಳಿಸಿ
  8. ಸೀತಾರಾಮರೇ, ಒಳ್ಳೆಯ ಪ್ರಶ್ನೆ. ನೀವೆತ್ತಿರುವ ಪ್ರಶ್ನೆಯಲ್ಲಿ ಫಲಾಪೇಕ್ಷೆಯ ವಿಷಯ ಮುಖ್ಯವಾದದ್ದೆನಿಸುತ್ತದೆ. ಫಲಾಪೇಕ್ಷೆಯೆಂದರೆ ಏನು? ಯಾವುದೋ ಒಂದು ಕ್ರಿಯೆಯಿಂದ ಪ್ರತಿಫಲವನ್ನು ನಿರೀಕ್ಷಿಸುವುದು, ಅಥವಾ ಅಂಥ ಫಲವನ್ನು ಉದ್ದೇಶಿಸಿಯೇ ಕರ್ಮವನ್ನು ಮಾಡುವುದು (ಕರ್ಮದ ತೀರ ತಾಂತ್ರಿಕ ವ್ಯಾಖ್ಯೆಗಳನ್ನು ಸಧ್ಯಕ್ಕೆ ಪಕ್ಕಕ್ಕಿಟ್ಟು, ಅದರ ಸಾಮಾನ್ಯಾರ್ಥವನ್ನು (ಅಂದರೆ ಯಾವುದೇ ಕೆಲಸ) ಗಮನಿಸೋಣ). ನೀವು ಐಚ್ಛಿಕವಾಗಿಯೋ ಅನೈಚ್ಛಿಕವಾಗಿಯೋ ಅನೈಚ್ಛಿಕವಾಗಿಯೋ ಮಾಡುವ ಯಾವುದೇ ಕೆಲಸಕ್ಕೆ ಒಂದು ಉದ್ದೇಶ (ಫಲದ ಅಪೇಕ್ಷೆ) ಇದ್ದೇ ಇರುತ್ತದೆ. ಒಂದು ಕಲ್ಲೆಸೆದರೆ ಅದರ ಹಿಂದೆ ಹಣ್ಣು ಬೀಳಲೆಂಬ ಉದ್ದೇಶವಿರುತ್ತದೆ, ಓಡಿದರೆ ಬಸ್ಸು ಹಿಡಿಯಲೆಂದೋ ನಾಯಿಯಿಂದ ತಪ್ಪಿಸಿಕೊಳ್ಳಲೆಂದೋ ಉದ್ದೇಶವಿರುತ್ತದೆ, ಅಥವ ಸುಮ್ಮನೆ ಬಿದ್ದ ಕಲ್ಲನ್ನು ಪಕ್ಕಕ್ಕೆ ಸರಿಸಿದರೂ ದಾರಿಯನ್ನು ನೇರಗೊಳಿಸುವ ಉದ್ದೇಶವಿರುತ್ತದೆ. ಕಣ್ಣಿನ ಮುಂದೆ ಸುಮ್ಮನೇ ಕೈಬೀಸಿದರೂ ಕಣ್ಣು ತಾನಾಗೇ ಮುಚ್ಚಿಕೊಳ್ಳುತ್ತದೆ; ಇನ್ನು ಹೃದಯ ಬಡಿಯುತ್ತದೆ, ಶ್ವಾಸ ಕೋಶ ತಿದಿಯೊತ್ತುತ್ತದೆ, ತಲೆ ನಿದ್ದೆಯಲ್ಲಿದ್ದಾಗಲೂ ಯೋಚಿಸುತ್ತದೆ, ಕನಸು ಕಾಣುತ್ತದೆ. ಇವೆಲ್ಲ ಅನೈಚ್ಛಿಕ ಕ್ರಿಯೆಗಳಲ್ಲೂ ಅದರದೇ ಆದ ಉದ್ದೇಶ ತಾನೇತಾನಾಗಿರುತ್ತದೆ. ಬಹುಶಃ ಅದಕ್ಕೆಂದೇ ಕೃಷ್ಣ ಹೇಳುತ್ತಾನೆ "ನ ಹಿ ಕಶ್ಚಿತ್ ಕ್ಷಣಮಪಿ ಜಾತು ತಿಷ್ಠತ್ಯಕರ್ಮಕೃತ್" ಆದ್ದರಿಂದ ನೀವು ಮಾಡಲಿ ಬಿಡಲಿ ಕರ್ಮ, ಕರ್ಮದ ಫಲ ತಾವೇ ತಾವಾಗಿ ಇರುತ್ತವೆ, ಮತ್ತು ಫಲಾಪೇಕ್ಷೆಯಿಲ್ಲದ ಕರ್ಮವಿಲ್ಲವೇ ಇಲ್ಲ! ಇದು ವ್ಯವಹಾರಿಕ ಸತ್ಯ. ಪರೀಕ್ಷೆಯಲ್ಲಿ ಪಾಸಾಗುವ ಉದ್ದೇಶವೇ ಇಲ್ಲದೇ ಪರೀಕ್ಷೆ ಬರೆಯುವುದಾದರೂ ಹೇಗೆ (ಏಕೆ). ಫಲದೃಷ್ಟಿಯಿಲ್ಲದ ಬೇಕಾಬಿಟ್ಟಿಯಾಗುತ್ತದೆಯಲ್ಲವೇ ("ಸರ್ಕಾರಿ ಕೆಲಸ ದೇವರ ಕೆಲಸ" ಎಂದಂತೆ!). ಇನ್ನು ಈ ವ್ಯಾವಹಾರಿಕ ಸತ್ಯ ಪರಮಾರ್ಥದಲ್ಲೂ ಸತ್ಯವೇ ಸೈ. ಪರಮಾರ್ಥಸಾಧನೆಯೆಂದರೆ ಏನು? ಮೋಕ್ಷಸಾಧನೆಯಲ್ಲವೇ? ಅಂದರೆ ಅಲ್ಲೂ ಫಲಾಪೇಕ್ಷೆ ಬಂತಲ್ಲ! ಪರಮಾರ್ಥವೆನ್ನುವುದೇ (ಪರಮ ಅರ್ಥ) ಸಾಧನೆಯ ಅಪೇಕ್ಷಿತ ಫಲವಲ್ಲವೇ? ಹಾಗಿದ್ದರೆ "ಅರ್ಥಮನರ್ಥಂ" ಅನ್ನುವ ಆಚಾರ್ಯರ ವಾಣಿಗೂ, "ಕರ್ಮಣ್ಯೇವಾಧಿಕಾರಸ್ತೇ, ಮಾ ಫಲೇಶು ಕದಾಚನ" ಅನ್ನುವ ಗೀತಾ ವಾಕ್ಯಕ್ಕೂ ಮೇಲೆ ಕಾಣಿಸಿದ ಸತ್ಯಕ್ಕೂ ವಿರೋಧವಿಲ್ಲವೇ? ಇಲ್ಲ! ಕರ್ಮಣ್ಯೇವಾಧಿಕಾರಸ್ತೇ, ಮಾ ಫಲೇಶು ಕದಾಚನ ಎಂದರೆ "ನಿನಗೆ ಯಾವಾಗಲು ಕರ್ಮದಲ್ಲಷ್ಟೇ ಅಧಿಕಾರ, ಫಲದಲ್ಲಲ್ಲ" ಎಂದಷ್ಟೇ ಅರ್ಥ. ಅಂದರೆ ಹೀಗೆ: ಯಾವುದೋ ಫಲ (aim) ನಿನ್ನ ದೃಷ್ಟಿಯಲ್ಲಿದೆ; ಅದನ್ನು ಸಾಧಿಸಲು ಮಾರ್ಗವನ್ನು ಕಂಡುಕೊಂಡಾಗಿದೆ; ಬೇಕಾದ ಪರಿಕರಗಳನ್ನು ಹೊಂದಿಸಿಕೊಂಡದ್ದಾಗಿದೆ; ಇನ್ನು ನಿನಗುಳಿದಿರುವ ದಾರಿ ಸಂಪೂರ್ಣ ಆ ಕರ್ಮದಲ್ಲಿ ಮನಸ್ಸು ಕೊಡುವುದು - ಅದೊಂದೇ ನಿನ್ನ ಕೆಲಸ. ಫಲದ ಚಿಂತೆ ಬೇಡ, ಏಕೆಂದರೆ ಒಂದುಬಾರಿ ನಿನ್ನ ದಾರಿಯನ್ನು ನಿಗದಿಗೊಳಿಸಿಕೊಂಡಮೇಲೆ, ಫಲ ಬರುತ್ತೋ ಇಲ್ಲವೋ ಎಂದು ತಲೆಕೆಡಿಸಿಕೊಳ್ಳುತ್ತಾ ಕರ್ಮವನ್ನು ಹಾಳುಮಾಡಿಕೊಳ್ಳುವುದು ಫಲವನ್ನೇ ಕೆಡಿಸುತ್ತದೆ; ಜೊತೆಗೆ ನಿಮ್ಮ ಕೈಲಾದ್ದನ್ನು ನಿರ್ವಂಚನೆಯಿಂದ ಮಾಡುವುದಷ್ಟೇ ನಮ್ಮ ಕೈಲಿರುವುದು; ಫಲಾಫಲಗಳು ನಮ್ಮ ಪ್ರಯತ್ನವನ್ನೂ ಮೀರಿ ಹತ್ತಾರು ಅಂಶಗಳನ್ನವಲಂಬಿಸಿವೆ ಅಲ್ಲವೇ (ಆಸ್ತಿಕರು ಬೇಕಿದ್ದರೆ ಅದನ್ನು ದೈವಕೃಪೆಯೆನ್ನಲೂ ಬಹುದು, ಒಟ್ಟಿನಲ್ಲಿ ಅದು ನಮ್ಮ ಕೈಲಿಲ್ಲ). ನಮ್ಮ ಕೈಲಿಲ್ಲದ್ದರ ಬಗ್ಗೆ ಚಿಂತಿಸಿ, ನಮ್ಮ ಕೈಲಿರುವುದನ್ನೂ ಹಾಳುಮಾಡಿಕೊಳ್ಳಬಾರದು ಅನ್ನುವುದು ಇಲ್ಲಿನ ಆಶಯ. ಸರಳವಾಗಿ ಹೇಳಬೇಕಾದರೆ, ಫಲದೃಷ್ಟಿಯಿರಲಿ, ಆದರೆ ಫಲದ ಮೇಲೆ ಮೋಹವಲ್ಲ. ಕರ್ಮದಲ್ಲೋ ಫಲದಲ್ಲೋ ನಿರ್ಮೋಹ/ನಿಸ್ಸಂಗ - ಇದು ಆಚಾರ್ಯರ (ಬಹುತೇಕ ಎಲ್ಲ ಆಚಾರ್ಯರ) ದೃಷ್ಟಿಯೆಂದು ನನ್ನ ಅನಿಸಿಕೆ - ಹೇಗೆಂದರೆ ಬಿಗಿದ ಹಗ್ಗದ ಮೇಲೆ ನೆಡೆಯುವಾಗ ಬೇಕಾದ್ದು ಅತೀವ ಏಕಾಗ್ರತೆ; ಅದರ ಫಲವೆಂದರೆ ಬೀಳದೇ ಆ ತುದಿಯನ್ನು ಸೇರುವುದು. ಆದರೆ ಬಿದ್ದುಬಿಡುತ್ತೇನೋ ಎಂಬ ಭಯ, ಬೀಳದೇ ಇರುವ ಬಗ್ಗೆ ಆತಂಕ (ಮೋಹ/ಸಂಗ) ಇದ್ದರೆ ಬೀಳುವ ಸಾಧ್ಯತೆ ಹೆಚ್ಚು. ಇಲ್ಲಿ ಮುನ್ನಾಭಾಯಿ ಚಿತ್ರದ ಡಾಕ್ಟರ್/ಪ್ರೊಫ಼ೆಸರ್ ನೆನಪಿಗೆ ಬರುತ್ತಾನೆ. "the patient to me is just a body; I don't have any love or affection towards him. Say if it is my own daughter, my hands will quaiver, and eventually I may kill her" ಇದು ಕರ್ಮ-ಫಲ-ಮೋಹದ ಸಂಬಂಧವನ್ನು ವಿಚಿತ್ರ ರೀತಿಯಲ್ಲಿ ಸ್ಪಷ್ಟಪಡಿಸುತ್ತದೆಯೆಂದು ನನ್ನ ಅನಿಸಿಕೆ.

    ಪ್ರತ್ಯುತ್ತರಅಳಿಸಿ
  9. ವಿ. ಆರ್. ಭಟ್ಟರೆ

    ನೀವು ಹೇಳಿದ ಕತೆ ಚೆನ್ನಾಗಿತ್ತು. ನಿಮ್ಮ ನಿರೂಪಣೆಯಿಂದ ವ್ಯಾಖ್ಯಾನವು ಮತ್ತಷ್ಟು ಮೆರುಗು ಪಡೆಯಿತು. ಧನ್ಯವಾದಗಳು ನಿಮಗೆ.

    ಪ್ರತ್ಯುತ್ತರಅಳಿಸಿ
  10. ಶ್ರೀಧರರೇ,

    ಉತ್ತಮ ವಿಚಾರವನ್ನು ತಿಳಿಸಿದಿರಿ. ಧನ್ಯವಾದಗಳು ನಿಮಗೂ.

    ಪ್ರತ್ಯುತ್ತರಅಳಿಸಿ
  11. ಸೀತಾರಾಮರೆ,

    ನಿಮ್ಮ ವಿಚಾರಕ್ಕೆ ಮಂಜುನಾಥರಿಂದ ಉತ್ತರ ದೊರೆತಿರಬಹುದು ಎಂದು ಭಾವಿಸುತ್ತೇನೆ.
    ಧನ್ಯವಾದಗಳು ನಿಮಗೂ.

    ಪ್ರತ್ಯುತ್ತರಅಳಿಸಿ
  12. ಮಂಜುನಾಥರೆ,

    ಒಳ್ಳೆಯ ವಿಚಾರವನ್ನು ಸ್ಪಷ್ಟವಾಗಿ ಹೇಳಿದ್ದೀರಿ. ಧನ್ಯವಾದಗಳು ನಿಮಗೆ.

    ಪ್ರತ್ಯುತ್ತರಅಳಿಸಿ
  13. ನನ್ನ ಮೊದಲಿನ ಪ್ರಶ್ನೆಗೆ ಉತ್ತರ ದೊರೆಯಿತು. ಇಡು ನೀರಿಕ್ಷಿಸಿದ್ದೆ. ಅದನ್ನು ತುಂಬಾ ಚೆನ್ನಾಗಿ ಮಂಜುನಾಥರು ವಿವರಿಸಿದ್ದಾರೆ. ಆದರೆ ಪ್ರಾಣಿಯಂತೆ ಇರುವದನ್ನ ಬಿಟ್ಟು ಮನುಷ್ಯ ಅದು -ಇಡು ಎಂದುಕೊಂಡು ಬದುಕನ್ನು ಸಂಕೀರ್ನಗೊಲಿಸಿದ್ದಾನೆ ಎಂಬುವದಕ್ಕೆ ನಿಮ್ಮಿಂದ ಒಂದು ಲಹರಿಯನ್ನು ನೀರಿಕ್ಷಿಸುತ್ತಾ ಇದ್ದೇನೆ....

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಪ್ರಾಣಿಗಳಂತೆ ಇರುವುದೆಂದರೆ ಹಸಿವು,ಭಯ,ನಿದ್ರೆ,ಮೈಥುನ ಇತ್ಯಾದಿಗಳಿಗೆ ಜನ್ಮದ ಉದ್ದೇಶವು ಸೀಮಿತವಾಗಿ, ಮನುಷ್ಯ ಪ್ರಾಣಿಗೆ ಮಾತ್ರ ವಿಶಿಷ್ಟವಾದ ಆಲೋಚನಾ ಶಕ್ತಿಯ ಕೊರತೆಯಾಗಿ ಮನುಷ್ಯನಿಗೂ ಪ್ರಾಣಿಗಳಿಗೂ ಏನೂ ವ್ಯತ್ಯಾಸವೇ ಇರುವುದಿಲ್ಲ.
      ಇದು ಬೇಕೇ ಹೇಳಿ.

      ಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ