Part - 69

ಮೂಲ:

ಅಂಧತ್ವ_ಮಂದತ್ವ_ಪಟುತ್ವ_ಧರ್ಮಾಃ

ಸೌಗುಣ್ಯ_ವೈಗುಣ್ಯ_ವಶಾದ್ಧಿ ಚಕ್ಷುಷಃ |

ಬಾಧಿರ್ಯ_ಮೂಕತ್ವ_ಮುಖಾಸ್ತಥೈವ

ಶ್ರೋತ್ರಾದಿಧರ್ಮಾ ನ ತು ವೇತ್ತುರಾತ್ಮನಃ ||೧೦೦||


ಪ್ರತಿಪದಾರ್ಥ:

ಅಂಧತ್ವ = ಕುರುಡುತನ, ಮಂದತ್ವ = ಮಂದನೋಟ , ಪಟುತ್ವ = ಚುರುಕು ನೋಟ , ಧರ್ಮಾಃ = ಇವೇ ಮೊದಲಾದ ಧರ್ಮಗಳು ; ಚಕ್ಷುಷಃ = ಕಣ್ಣಿನ , ಸೌಗುಣ್ಯ = ಉತ್ತಮವಾಗಿರುವುದು, ವೈಗುಣ್ಯ = ಅವಗುಣ , ವಶಾತ್ ಹಿ = ಇವುಗಳಿಂದಲೇ ಉಂಟಾಗುತ್ತದೆ ; ತಥಾ ಏವ = ಹಾಗೆಯೇ , ಬಾಧಿರ್ಯ_ಮೂಕತ್ವ-ಮುಖಾಃ = ಕಿವುಡು ಮೂಕತನ ಮೊದಲಾದವು , ಶ್ರೋತ್ರಾದಿ ಧರ್ಮಾಃ = ಕಿವಿಯೇ ಮೊದಲಾದವುಗಳ ಧರ್ಮವು , ವೇತ್ತುಃ = ಜ್ಞಾತೃವಾದ , ಆತ್ಮನಃ = ಆತ್ಮನ , ನ ತು = ಧರ್ಮವಲ್ಲ .


ತಾತ್ಪರ್ಯ:

ಕಣ್ಣಿನ ಸೌಗುಣ್ಯದಿಂದ ತೀಕ್ಷ್ಣತ್ವವೂ ವೈಗುಣ್ಯದಿಂದ ಕುರುಡುತನ ಹಾಗೂ ಮಂದತ್ವವೂ ಉಂಟಾಗುತ್ತದೆ. ಹಾಗೆಯೇ ಕಿವುಡು, ಮೂಕತನ ಮೊದಲಾದವು ಕಿವಿ, ವಾಗಿಂದ್ರಿಗಳ ಧರ್ಮವೇ ಹೊರತು ಜ್ಞಾತೃವಾದ ಆತ್ಮನ ಧರ್ಮವಲ್ಲ.


ವಿವರಣೆ:

ಕಠೋಪನಿಷತ್ತಿನಲ್ಲಿ ' ಸೂರ್ಯೋ ಯಥಾ ಸರ್ವಲೋಕಸ್ಯ ಚಕ್ಷುರ್ನ ಲಿಪ್ಯತೇ ಚಾಕ್ಷುಷೈರ್ಬಾಹ್ಯದೋಷೈಃ | ಏಕಸ್ತಥಾ ಸರ್ವಭೂತಾಂತರಾತ್ಮಾ ನ ಲಿಪ್ಯತೇ ಲೋಕ ದುಃಖೇನ ಬಾಹ್ಯಃ ||ಎಂಬ ವಾಕ್ಯವು ಬರುತ್ತದೆ. ಎಲ್ಲ ಲೋಕಗಳನ್ನು ತನ್ನ ದಿವ್ಯ ತೇಜಸ್ಸಿನಿಂದ ನೋಡುವ ಅಂದರೆ ಬೆಳಗುವ ಸೂರ್ಯನಿಗೆ ಯಾವ ಲೋಕದಲ್ಲಿ ಸಂಭವಿಸುವ ಗುಣಾವಗುಣಗಳು ಬಾಧಿಸುತ್ತವೆ ?. ಹೊರಗಿನ ಯಾವ ದೋಷಗಳೂ ರವಿಗೆ ತಟ್ಟುವುದಿಲ್ಲ , ಆತನು ಸದಾ ನಿರ್ಲಿಪ್ತನಾಗೇ ಇರುತ್ತಾನೆ. ಹಾಗೆಯೆ ಒಂದೇ ಆಗಿರುವ ಸರ್ವ ಪ್ರಾಣಿಗಳ ಅಂತರಾತ್ಮನು ಲೋಕದ ಸುಖ-ದುಃಖಗಳಿಂದ ಬಾಧಿತನಾಗುವುದಿಲ್ಲ ಎಂಬದು ತಾತ್ಪರ್ಯ. ಪ್ರಸ್ತುತ ಶ್ಲೋಕದಲ್ಲಿ ಬಾಹ್ಯೇಂದ್ರಿಯ ಧರ್ಮಗಳನ್ನು ಹೇಳುತ್ತಾ , ಕಣ್ಣು ಚೆನ್ನಾಗಿದ್ದರೆ ಚುರುಕಾದ ನೋಟವು ಸಿದ್ಧಿಸುತ್ತದೆ. ಕೆಟ್ಟರೆ ಕುರುಡುತನ ಇಲ್ಲವೇ ಮಂದದೃಷ್ಟಿ ಹೊಂದಬೇಕಾಗುತ್ತದೆ. ಅದರಂತೆ ಕಿವಿಯ ತಮಟೆಯು ಚೆನ್ನಾಗಿದ್ದರೆ ಶಬ್ದವು ಸ್ಪಷ್ಟವಾಗಿ ಕೇಳಿಸುತ್ತದೆ, ಇಲ್ಲವಾದರೆ ಕಿವುಡು, ಅಸ್ಪಷ್ಟತೆಯ ದೋಷಗಳು ಎದುರಾಗುತ್ತದೆ. ಇದೇ ಪ್ರಮೇಯವು ವಾಕ್, ಪಾಣಿ, ಪಾದ ಮುಂತಾದವುಗಳಿಗೂ ಅನ್ವಯವಾಗುತ್ತದೆ. ಇವೆಲ್ಲವೂ ಆಯಾ ಇಂದ್ರಿಯಗಳ ಧರ್ಮವೇ ಹೊರತು ಆತ್ಮದೋಷವಲ್ಲ ಎಂದು ಹೇಳುತ್ತಾರೆ. ದೃಷ್ಟಿದೋಷ, ಚುರುಕುತನ, ಮೂಕತ್ವವೆಲ್ಲಕ್ಕೂ ಆತ್ಮನು ಸಾಕ್ಷಿರೂಪನಾಗಿ ಇರುತ್ತಾನೆ ಹೊರತು ಅವುಗಳಿಂದ ಲಿಪ್ತನಾಗುವುದಿಲ್ಲ ಎಂದು ಈ ಶ್ಲೋಕದಲ್ಲಿ ಇಂದ್ರಿಯಗಳ ಉದಾಹರಣೆಯನ್ನು ಕೊಟ್ಟು ವಿವರಿಸುತ್ತಾರೆ.

ರೇಷ್ಮೆ ಸೀರೆಯ ಡಿಸೈನ್ ಚೆನ್ನಾಗಿಲ್ಲ ಎಂದರೆ ಅದು ಗ್ರಾಹಕನ ಅಥವಾ ವಿನ್ಯಾಸಕಾರನ ದೃಷ್ಟಿಯಿಂದಾಗಿರುವುದೇ ಹೊರತು ರೇಷ್ಮೆ ನೂಲಿನ ಅಥವಾ ಅದನ್ನು ಸೃಷ್ಟಿಸಿದ ಹುಳುವಿನ ದೋಷವಾಗುವುದಿಲ್ಲ. ನದಿಯಲ್ಲಿ ನೀರು ಕಡಿಮೆಯಾಗಿದೆ ಅಥವಾ ಸಮುದ್ರದಲ್ಲಿ ನೀರು ಹೆಚ್ಚಿದೆ ಎಂದು ನೀರಿಗೆ ಉಪಾಧಿಯನ್ನು ಆರೋಪಿಸಿ ಅದರ ಗಾತ್ರ-ಪಾತ್ರವನ್ನು ವಿವರಿಸಬೇಕಾಗುತ್ತದೆ. ಕೇವಲ ನೀರು ಇಂಗಿ ಹೋಗಿದೆ ಎಂದರೆ, ಎಲ್ಲಿ !? ಎಂಬ ಪ್ರಶ್ನೆ ಕಾಡುತ್ತದೆ (ಪಾತ್ರೆಯಲ್ಲಿ ಅಥವಾ ಬಾವಿಯಲ್ಲಿ ಎಂಬ ಉಪಾಧಿಯನ್ನು ಹೇಳಬೇಕಾಗುತ್ತದೆ) . ಬೆಂಕಿಯು ಅಡುಗೆಯ ಒಲೆಯಲ್ಲಿ ಸಣ್ಣದಾಗಿ ಉರಿದರೆ ಅರಣ್ಯದಲ್ಲಿ ಕಾಳ್ಗಿಚ್ಚು ಎಂಬ ಉಪಾಧಿಯನ್ನು ಪಡೆಯುತ್ತದೆ. ಅಧಿಷ್ಠಾನವಿಲ್ಲದಿದ್ದರೂ ನೀರು, ಬೆಂಕಿ ಮುಂತಾದವುಗಳು ಮೂಲವಸ್ತುವಿನ ರೂಪದಲ್ಲಿ ಇದ್ದೇ ಇರುತ್ತದೆ. ಹೀಗೆ ನಿರುಪಾಧಿಕವಾಗಿ ಸರ್ವಪ್ರಾಣಿಗಳಲ್ಲೂ ಸಾಕ್ಷಿರೂಪನಾಗಿ ಆತ್ಮನು ಇರುತ್ತಾನೆ ಎಂದು ಈ ಉದಾಹರಣೆಗಳ ಮೂಲಕ ತಿಳಿಯಬಹುದು.

............

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ